ಹುಲಿ ವೇಷ ತುಳುನಾಡಿನ ಹಿರಿಮೆ : ನಳಿನ್ ಕುಮಾರ್ ಕಟೀಲ್

ಮಂಗಳೂರು: ಕರಾವಳಿಗೆ ಸೀಮಿತವಾಗಿದ್ದ ಹುಲಿವೇಷ ಈಗ ರಾಜ್ಯಾದ್ಯಂತ ಪಸರಿಸುತ್ತಿದ್ದು, ದೇಶ-ವಿದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿರುವ ಈ ಕಲೆ ತುಳುನಾಡಿನ ಹಿರಿಮೆಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆದ ದ್ವಿತೀಯ ವರ್ಷದ ಕುಡ್ಲದ ಪಿಲಿ ಪರ್ಬ-2023 ಸ್ಪರ್ಧಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನ ಆಚರಣೆಗಳು ಭಕ್ತಿ, ನಂಬಿಕೆಯೊಂದಿಗಿರುವ ಕಾರಣ ದೇವರ, ದೈವಗಳ ಚಿಂತನೆಯನ್ನು ನಮ್ಮ ಹಿರಿಯರು ಕೊಟ್ಟರು. ಸಂಕಷ್ಟ ಬಂದಾಗ ಹುಲಿವೇಷ ಹಾಕುವ ಹರಕೆ ಹೇಳುತ್ತಿದ್ದರು. ಪಿಲಿವೇಷಕ್ಕೆ ತನ್ನದೇ ಆಗಿರುವ ಚೌಕಟ್ಟಿದೆ. ಇಂತಹ ಕಲೆಗೆ ಸ್ಪರ್ಧಾತ್ಮಕ ಮನೋಭಾವ ಕೊಟ್ಟು ಪ್ರೋತ್ಸಾಹಿಸಿದ ಕುಡ್ಲ ಪಿಲಿಪರ್ಬದ ರೂವಾರಿ, ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿ, ಅಭಿನಂದಿಸಿದರು.
ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ ಎಂದರು.
ಉದ್ಘಾಟನೆಯ ನಂತರ ಪಿಲಿಪರ್ಬ-2023 ಸ್ಪರ್ಧಾಕೂಟದ ಮೊದಲ ತಂಡವಾಗಿ ಶಿವಶಕ್ತಿ ಟೈಗರ್ಸ್ ಕುಂಜತ್ತೂರು, ಮಂಜೇಶ್ವರ ಪ್ರದರ್ಶನ ನೀಡಿತು.
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನಿತಾ ಪೂಜಾರಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ, ಕಾರ್ಯದರ್ಶಿ ಉದಯ ಪೂಜಾರಿ, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಹರಿಕೃಷ್ಣ ಬಂಟ್ವಾಳ, ನರೇಶ್ ಶೆಣೈ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ತೀರ್ಪುಗಾರರಾದ ಕಮಲಾಕ್ಷ ಬಜಿಲಕೇರಿ,ನವನೀತ ಶೆಟ್ಟಿ ಕದ್ರಿ, ಕೆ.ಕೆ. ಪೇಜಾವರ, ಪಿ.ಎಸ್. ವೆಂಕಟೇಶ್ ಭಟ್, ರೋಹನ್ ತೊಕ್ಕೊಟ್ಟು, ನವೀನ್ ಕುಮಾರ್ ಬಿ., ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಎಕ್ಕಾರು ಮತ್ತು ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.







