ರೈಲ್ವೇ ಟ್ರ್ಯಾಕ್ ಅಂಡರ್ಪಾಸ್ ಕಾಮಗಾರಿಗೆ ರೈಲ್ವೇ ಇಲಾಖೆ ಒಪ್ಪಿಗೆ : ಯುಟಿ ಖಾದರ್

ಉಳ್ಳಾಲ: ತೊಕ್ಕೋಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ವರೆಗೆ 35ಕೋಟಿ ರೂ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ ಶೀಘ್ರದಲ್ಲೇ ನಡೆಯಲಿದ್ದು, ಕಳೆದ 75 ವರುಷಗಳಿಂದ ದೊಡ್ಡ ಬೇಡಿಕೆಯಾಗಿದ್ದ ಒಳಪೇಟೆ ಸಂಪರ್ಕಿಸುವ ರೈಲ್ವೇ ಟ್ರ್ಯಾಕ್ಗೆ ಅಂಡರ್ಪಾಸ್ ಕಾಮಗಾರಿ ನಡೆಸಲು ರೈಲ್ವೇ ಇಲಾಖೆ ಸಹಮತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಎರಡು ಕೋಟಿ ರೂ, ವೆಚ್ಚದಲ್ಲಿ ಅಂಡರ್ಪಾಸ್ ಕಾಮಗಾರಿ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಅವರು ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲ್ವೇ ಹಳಿಗೆ ಅಂಡರ್ಪಾಸ್ ನಿರ್ಮಾಣ ಮತ್ತು ರೈಲ್ವೇ ಓವರ್ಬ್ರಿಡ್ಜ್ ಅಗಲೀಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ತೊಕ್ಕೋಟ್ಟು ಒಳಪೇಟೆ ಉಳ್ಳಾಲದ ಕೇಂದ್ರ ಪ್ರದೇಶ, ರಾಷ್ಟ್ರೀಯ ಹೆದ್ದಾರಿಯಿಂದ ಉಳ್ಳಾಲ ನಗರಕ್ಕೆ ಸಂಪರ್ಕಿಸುವ ಕೊಂಡಿ ರಸ್ತೆಯಾಗಿದ್ದು, ರೈಲ್ವೇ ಹಳಿಯನ್ನು ದಾಟಿಕೊಂಡು ಸಾರ್ವಜನಿಕ ಮೈದಾನ, ಮಾರ್ಕೆಟ್, ಶಾಲಾ ಕಾಲೇಜು, ದರ್ಗಾ, ದೇವಸ್ಥಾನ, ಚರ್ಚ್ ಗೆ ಪ್ರತೀ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೋಗುತ್ತಿದ್ದಾರೆ .ಕಳೆದ 75ವರುಷಗಳಿಂದ ಈ ರೈಲ್ವೇ ಹಳಿ ದಾಟಿ ಜನರು ಹೋಗುತ್ತಿದ್ದರು. ಕೆಲವೊಂದು ಕಡೆ ಕೆಲವು ಅನಾಹುತಗಳು ಆಗಿದ್ದವು, ಇದರ ಬಗ್ಗೆ ರೈಲ್ವೇಯವರು ಬಹಳಷ್ಟು ವರ್ಷದಿಂದ ಈ ರಸ್ತೆಯನ್ನು ಬಂದ್ ಮಾಡಲು ಬೇಡಿಕೆಯನ್ನಿಟ್ಟಿದ್ದರೂ ಕೂಡ ಸಂದರ್ಭಕ್ಕೆ ಅನುಗುಣವಾಗಿ ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ನಿಲ್ಲಿಸಿದ್ದೆವು, ಕಳೆದ ವರ್ಷ ರೈಲ್ವೇಯವರು ಕೆಲವೊಂದು ಪ್ರದೇಶದಲ್ಲಿ ಸಾವು ನೋವು ಆದ್ದರಿಂದ ಜನಸಾಮಾನ್ಯರ ಹಿತದೃಷ್ಟಿಯ ಉದ್ದೇಶದಿಂದ ಈ ಗೇಟ್ ಬಂದ್ ಮಾಡುವುದು ಅನಿವಾರ್ಯ ಎಂದಾಗ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ, ಜಿಲ್ಲಾಧಿಕಾರಿ ವರದಿಯಂತೆ ರೈಲ್ವೇ ಸಚಿವ ಸೋಮಣ್ಣ ಅವರು ಮಂಗಳೂರಿಗೆ ಬಂದಾಗ ಮನವರಿಕೆಮಾಡಿದ್ದರು. ಇದೀಗ ಕೇಂದ್ರ ರೈಲ್ವೇ ಇಲಾಖೆಯವರು ಅಂಡರ್ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಬಹು ವರ್ಷದ ಬೇಡಿಕೆಯಾದ ಅಂಡರ್ ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು.
ಈ ಅಂಡರ್ಪಾಸ್ನಲ್ಲಿ ಜನಸಾಮಾನ್ಯರು ನಡೆದುಕೊಂಡು ಹೋಗಲು ಮತ್ತು ದ್ವಿಚಕ್ರವಾಹನ ಸಂಚರಿಸಲು ಅವಕಾಶ ಇದೆ. ಇದರೊಂದಿಗೆ ಉಳ್ಳಾಲ ನಗರವನ್ನು ಸಂಪರ್ಕಿಸುವ ಓವರ್ಬ್ರಿಡ್ಜ್ ಅಗಲೀಕರಣಕ್ಕೂ ಒಪ್ಪಿಗೆ ಸಿಕ್ಕಿದ್ದು ಮೂರು ಕೋಟಿ ರೂ ವೆಚ್ಚದಲ್ಲಿ ಅಜಲೀಕರಣ ಕಾಮಗಾರಿ ನಡೆಯಲಿದೆ ಎಂದರು.
ಈಗಾಗಲೇ ಉಳ್ಳಾಲ ಜಂಕ್ಷನ್ನಿಂದ ಉಳ್ಳಾಲಬೈಲುವರೆಗೆ ದ್ವಿಪಥ ರಸ್ತೆಯೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಉಳ್ಳಾಲ ಬೈಲ್ನಿಂದ ರಾಷ್ಟೀಯ ಹೆದ್ದಾರಿ66ರ ಸಂಪರ್ಕಿಸುವ ತೊಕ್ಕೊಟ್ಟು ಓವರ್ಬ್ರಿಡ್ಜ್ವರೆಗೆ ರಸ್ತೆ ಅಗಲೀಕರಣಕ್ಕೆ 35ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಯೋಜನೆ ಸಿದ್ಧಗೊಂಡು ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಬಾಕಿ ಇದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಸಹಾಯಕ ಡಿವಿಜನ್ ಇಂಜಿನಿಯರ್ ಅಶೋಕ್, ಮಂಗಳೂರು ಹಿರಿಯ ಸೀನಿಯರ್ ಸೆಕ್ಷನ್ ಇಂಜಿನಿಯರ್ ಮುಹಸಿನ್, ಕಣ್ಣೂರು ಹಿರಿಯ ಸೆಕ್ಷನ್ ಇಂಜಿನಿಯರ್ ಅಕ್ಷಯ್, ಉಳ್ಳಾಲ ನಗರ ಸಭೆ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ನಗರ ಸಭಾ ಸದಸ್ಯರಾದ ಅಯ್ಯೂಬ್ ಮಂಚಿಲ, ಗೀತಾ ಬಾಯಿ ,ರವಿಚಂದ್ರ ಗಟ್ಟಿ, ನಗರ ಸಭೆ ಆಯುಕ್ತ ನವೀನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.







