ಹಜ್ ಯಾತ್ರೆಗೆ ಸೌದಿ ರಾಜರಿಂದ ಆಹ್ವಾನಿತರಲ್ಲಿ ಮಂಗಳೂರಿನ ಸಫ್ವಾನ್ ಜುನೈದ್

ಸಫ್ವಾನ್ ಜುನೈದ್
ಮಂಗಳೂರು: ಪವಿತ್ರ ಮಕ್ಕಾ ಹಾಗು ಮದೀನಾ ಮಸೀದಿಗಳ ಪಾಲಕರಾದ ಸೌದಿ ಅರೇಬಿಯಾದ ರಾಜರ ಅತಿಥಿಯಾಗಿ ಪವಿತ್ರ ಹಜ್ ಯಾತ್ರೆಗೈಯಲು ಮಂಗಳೂರಿನ ಪಾಂಡೇಶ್ವರ ನಿವಾಸಿ ಸಫ್ವಾನ್ ಜುನೈದ್ ಅವರಿಗೆ ಆಹ್ವಾನ ಬಂದಿದೆ.
ಸೌದಿ ರಾಯಭಾರ ಕಚೇರಿಯು ಹಜ್ಯಾತ್ರೆಗಾಗಿ ಜಗತ್ತಿನ ವಿವಿಧ ದೇಶಗಳಿಂದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತದೆ. ಇದನ್ನು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಸಂಯೋಜಿಸುತ್ತದೆ. ಈ ಎಲ್ಲಾ ಅತಿಥಿಗಳ ಹಜ್ ಪ್ರಯಾಣದ ವೆಚ್ಚವನ್ನು ಸೌದಿ ಅರೇಬಿಯಾದ ರಾಜ ಭರಿಸುತ್ತಾರೆ. ಈ ಹಾಜಿಗಳಿಗೆ ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡುವ ಅವಕಾಶವಿರುತ್ತದೆ. ಮಂಗಳೂರಿನ ಸಫ್ವಾನ್ ಜುನೈದ್ರ ಸಾಮಾಜಿಕ, ಧಾರ್ಮಿಕ ಚಟುವಟಿಕೆಯನ್ನು ಪರಿಗಣಿಸಿ ಈ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಹಜ್ ಯಾತ್ರೆಗೈಯಲು ಸೌದಿ ಅರೇಬಿಯಾದ ರಾಜನ ಅತಿಥಿಗಳಾಗಿ ವಿಶ್ವದ ವಿವಿಧೆಡೆಗಳಿಂದ 1300ಕ್ಕೂ ಅಧಿಕ ಮಂದಿ ಹಜ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಈ ಬಾರಿ ಭಾರತದಿಂದ 30 ಮಂದಿಗೆ ಅವಕಾಶ ಲಭಿಸಿದೆ. ಈ ಪೈಕಿ ಮಂಗಳೂರಿನ ಸಫ್ವಾನ್ ಜುನೈದ್ ಕೂಡ ಒಬ್ಬರಾಗಿದ್ದಾರೆ. ಈ ಅತಿಥಿಗಳು ಮೇ 27ರಂದು ಹೊಸದಿಲ್ಲಿಯಲ್ಲಿರುವ ಸೌದಿ ರಾಯಭಾರ ಕಚೇರಿಗೆ ಭೇಟಿ ನೀಡಲಿದ್ದಾರೆ. ಮೇ 28ರಂದು ಹೊಸದಿಲ್ಲಿಯಿಂದ ಇವರ ಹಜ್ ಯಾತ್ರೆ ಆರಂಭವಾಗಲಿದೆ.