ಉಳ್ಳಾಲ ಬೀಚ್ ನಲ್ಲಿ ಮತದಾನ ಜಾಗೃತಿಗಾಗಿ ಮರಳು ಶಿಲ್ಪ ರಚನೆ

ಉಳ್ಳಾಲ, ಎ.20: ಉಳ್ಳಾಲ ತಾಲೂಕು ಪಂಚಾಯತ್, ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ಹಾಗೂ ಸೋಮೆಶ್ವರ ಪುರಸಭೆಯ ಸಹಭಾಗಿತ್ವದಲ್ಲಿ ಮತದಾನ ಜಾಗೃತಿಗಾಗಿ ಉಳ್ಳಾಲ ಸಮುದ್ರ ಕಿನಾರೆ ಬಳಿ ಮರಳು ಶಿಲ್ಪ ರಚಿಸಲಾಯಿತು.
ಮತದಾನಕ್ಕೆ ಸಂಬಂಧಪಟ್ಟಂತೆ 'ಚುನಾವಣಾ ಪರ್ವ ದೇಶದ ಗರ್ವ' ಘೋಷವಾಕ್ಯವನ್ನು ಒಳಗೊಂಡ ಮರುಳು ಶಿಲ್ಪ ಸಮುದ್ರ ಕಿನಾರೆಯಲ್ಲಿ ನೆರೆದಿದ್ದವರ ಗಮನಸೆಳೆಯಿತು. ಜಾನಪದ ಕಲೆಯಾದ ದುಡಿ ಕಲೆಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಈ ವೇಳೆ ನಡೆದ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ. ಬಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಎಪ್ರಿಲ್ 26ರಂದು ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಹಲವಾರು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಂಗವಾಗಿ ಮರಳಿನ ಆಕೃತಿ ರಚಿಸುವ ಮೂಲಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನಶೆಟ್ಟಿ ಹಾಗೂ ಕೃಷ್ಣಪ್ಪ ಮೂಲ್ಯ ನೆರೆದಿದ್ದವರಿಂದ ಮತದಾನ ಘೋಷಣೆ ಮೊಳಗಿಸಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶೈಲಾ ಕೆ. ಕಾರಿಗಿ, ಉಳ್ಳಾಲ ನಗರಸಭೆ ಪೌರಾಯುಕ್ತ ರಾಘವೇಂದ್ರ, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ ಸೆರೆಗೊಪ್ಪ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ರಾಜು, ಸ್ವೀಪ್ ಮಾಸ್ಟರ್ ಟ್ರೈನರ್ ಶರಣ್ಯಾ ಶೆಟ್ಟಿ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ರಮೇಶ್ ನಾಯ್ಕ್ ವಂದಿಸಿದರು. ಸ್ವೀಪ್ ಮಾಸ್ಟರ್ ಟ್ರೈನರ್ ಸಚೇತ್ ಕುಮಾರ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.







