ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್ಡಿಪಿಐ ಪ್ರತಿಭಟನೆ

ಮಂಗಳೂರು: ವಕ್ಫ್ ಆಸ್ತಿ ಉಳಿಸಬೇಕು ಎಂದು ಆಗ್ರಹಿಸಿ ಮತ್ತು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಎಸ್ಡಿಪಿಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರೈತರು, ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಪ್ರಯತ್ನ ಸಾಗಿಸುತ್ತಲೇ ಇದೆ. ಇದೀಗ ಮುಸ್ಲಿಮರನ್ನು ಅಭಿವೃದ್ಧಿಪಡಿಸುವ ನೆಪವೊಡ್ಡಿ ವಕ್ಫ್ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ಇದು ಸಂಘಪರಿವಾರದ ಹಿಡೆನ್ ಅಜೆಂಡಾ ಆಗಿದೆ. ಮುಸ್ಲಿಮರ ಸಬಲೀಕರಣಕ್ಕೆ ಮೀಸಲಿಟ್ಟಿರುವ ವಕ್ಫ್ ಸೊತ್ತನ್ನು ಕಬಳಿಸಲು ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ. ವಕ್ಫ್ ಆಸ್ತಿಯ ಉಳಿವಿಗಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.
ಎಸ್ಡಿಪಿಐ ರಾಜ್ಯ ಸಮಿತಿಯ ಸದಸ್ಯರಾದ ರಿಯಾಝ್ ಕಡಂಬು, ಶಾಹಿದಾ ತಸ್ನೀಮ್, ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಮುಖಂಡ ಅಶ್ರಫ್ ಅಡ್ಡೂರು ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಸಮಿತಿಯ ಸದಸ್ಯ ನವಾಝ್ ಉಳ್ಳಾಲ್, ಸುಹೈಲ್ ಮತ್ತಿತರರು ಉಪಸ್ಥಿತರಿದ್ದರು.







