ಸೆ.3: ಶಿಕ್ಷಕರ ಅರ್ಹತಾ ಪರೀಕ್ಷೆ; ಅಗತ್ಯ ಕ್ರಮಗಳಿಗೆ ಎಡಿಸಿ ಸೂಚನೆ

ಮಂಗಳೂರು, ಆ.31: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಸೆ.3ರಂದು ನಡೆಯಲಿದ್ದು, ಇದರ ಯಶಸ್ವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗೆಂದು ಜಿಲ್ಲೆಯಲ್ಲಿ 15 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲನೇ ಪತ್ರಿಕೆಯ ಪರೀಕ್ಷೆಯು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 12ರವರೆಗೆ 10 ಕೇಂದ್ರಗಳಲ್ಲಿ ನಡೆಯಲಿದೆ. ಎರಡನೇ ಪತ್ರಿಕೆಯ ಪರೀಕ್ಷೆಯು 15 ಕೇಂದ್ರಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 4:30ರ ವರೆಗೆ ನಡೆಯಲಿದೆ.
ಮೊದಲ ಪತ್ರಿಕೆಯ ಪರೀಕ್ಷೆಯನ್ನು 2,430 ಹಾಗೂ ಎರಡನೇ ಪತ್ರಿಕೆಯ ಪರೀಕ್ಷೆಯನ್ನು 3,733 ಅಭ್ಯರ್ಥಿಗಳು ಬರೆಯಲಿ ದ್ದಾರೆ. ಒಟ್ಟು 328 ಕೊಠಡಿ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಕೇಂದ್ರದಲ್ಲೂ ಒಂದು ಮೊಬೈಲ್ ಸ್ವಾಧೀನಾಧಿಕಾರಿ ಇರುತ್ತಾರೆ ಎಂದು ಡಾ. ಸಂತೋಷ್ ಕುಮಾರ್ ಮಾಹಿತಿ ನೀಡಿದರು.
ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಸೂಕ್ತ ವೈದ್ಯಕೀಯ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಅನಾವಶ್ಯಕ ಸಂಚಾರದಿಂದ ಎಚ್ಚರವಹಿಸಬೇಕು. ಪರೀಕ್ಷಾ ವೇಳೆಯಲ್ಲಿ ಜೆರಾಕ್ಸ್ ಅಂಗಡಿ ಮುಚ್ಚಿಸಿರಬೇಕು, ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವ ಡಿಸಬೇಕು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲು ಮೆಸ್ಕಾಂಗೆ ಸೂಚನೆ ನೀಡ ಬೇಕು. ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಓಎಂಆರ್ ಅನ್ನು ಸರಿಯಾಗಿ ಪರೀಕ್ಷಿಸಲು ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಡಾ. ಸಂತೋಷ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ್ ರಾಮಚಂದ್ರ ನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ವಿವಿಧ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಲ್ ಪಾಯಿಂಟ್ ಪೆನ್, ಜ್ರಾಮಿಟಿಗೆ ಅವಕಾಶ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಅವರ ಪ್ರವೇಶ ಪತ್ರದಲ್ಲಿ ಸೂಚಿಸಿರುವಂತೆ ಹಂಚಿಕೆ ಮಾಡಲಾದ ಪರೀಕ್ಷಾ ಕೇಂದ್ರಗಳ ಲ್ಯಾಂಡ್ ಮಾರ್ಕ್ ಆಧರಿಸಿ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದೊಂದಿಗೆ ನಿಗದಿತ ಸಮಯದಲ್ಲಿ ಹಾಜರಾಗಬೇಕು.
ಕ್ಯಾಲ್ಕ್ಯುಲೇಟರ್, ಮೊಬೈಲ್, ಪೇಜರ್, ಬ್ಲೂಟೂತ್ ಹಾಗೂ ಇತರೆ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮತ್ತು ಲಾಗ್ಟೇಬಲ್, ಬಿಳಿ ಫ್ಲೂಯಿಡ್, ಬೆಂಕಿಪೊಟ್ಟಣ ಅಥವಾ ಸಿಗರೇಟ್, ಲೈಟರ್ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪರೀಕ್ಷಾ ಕೊಠಡಿಯೊಳಕ್ಕೆ ನೀಲಿ ಅಥವಾ ಕಪ್ಪುಶಾಯಿಯ ಬಾಲ್ಪಾಯಿಂಟ್ ಪೆನ್ ಮತ್ತು ಗಣಿತಕ್ಕೆ ಸಂಬಂಧಿಸಿದ ಜಾಮಿಟ್ರಿ ಪರಿಕರಗಳನ್ನು ಮಾತ್ರ ಪ್ರವೇಶ ಪತ್ರದೊಂದಿಗೆ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ್ ತಿಳಿಸಿದ್ದಾರೆ.







