ಸೆ.9: ಮಂಗಳೂರಿನಲ್ಲಿ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ

ಮಂಗಳೂರು, ಸೆ.6: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ, ಸಿಪಿಐ ಹಾಗೂ ಎಐಟಿಯುಸಿ ನಾಯಕರು, ರಾಜ್ಯಸಭೆ ಹಾಗೂ ವಿಧಾನಸಭೆಯ ಸದಸ್ಯ, ಚಿಂತಕ, ಲೇಖಕ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮವು ಸೆ.9ರಂದು ಬೆಳಗ್ಗೆ 10ಕ್ಕೆ ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನ ದಲ್ಲಿ ನಡೆಯಲಿದೆ.
ದಿಲ್ಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ, ಸಂಶೋಧಕ, ಲೇಖಕ ಹಾಗೂ ಜನಕಲಾ ಸಂಘಟಕ ಡಾ.ಶಂಸುಲ್ ಇಸ್ಲಾಂ ಅವರು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 - ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಬಿವಿ ಕಕ್ಕಿಲ್ಲಾಯ ಅವರ ಗೌರವಾರ್ಥ ದೇಶದ ಬಹುಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆಯನ್ನೂ, ಮಾರ್ಗೋಪಾಯಗಳನ್ನೂ ಪ್ರಚೋದಿಸುವ ಉದ್ದೇಶದಿಂದ ಪ್ರತೀ ವರ್ಷ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಈ ವರ್ಷದ ಉಪನ್ಯಾಸವನ್ನು ಬೆಂಗಳೂರಿನ ಹೊಸತು ಮಾಸ ಪತ್ರಿಕೆ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಹಾಗೂ ಮಂಗಳೂರು ವಿವಿ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗುತ್ತಿವೆ.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಮಂಜುನಾಥ್ ಅನುವಾದಿಸಿದ ನವಕರ್ನಾಟಕ ಪ್ರಕಾಶನವು ಪ್ರಕಟಿಸಿರುವ ಡಾ. ಶಂಸುಲ್ ಇಸ್ಲಾಂ ಅವರ ಕೃತಿ ‘ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 - ಹೇಳದೇ ಉಳಿದ 1857ರ ಅದ್ಭುತ ಕಥೆಗಳು’ನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯರಾಜ್ ಅಮೀನ್ ಬಿಡುಗಡೆಗೊಳಿಸಲಿದ್ದಾರೆ.
ಡಾ. ಶಂಸುಲ್ ಇಸ್ಲಾಂ ಅವರು ರಾಷ್ಟ್ರೀಯ ಪತ್ರಾಗಾರಗಳಿಂದ ಸಂಗ್ರಹಿಸಿರುವ, ಹಿಂದೆಂದೂ ಪ್ರಕಟಿಸಲ್ಪಡದೆ ಉಳಿದಿರುವ, ಮೊದಲ ಸ್ವಾತಂತ್ರ್ಯ ಸಂಗ್ರಾಮದ 1857-58ರ ಕಾಲದ ಕರ್ನಾಟಕದ ಎಲ್ಲಾ ಜಾತಿ, ಮತ, ಪಂಥ, ಸಾಮಾಜಿಕ-ಆರ್ಥಿಕ ಸ್ತರಗಳಿಗೆ ಸೇರಿದ್ದ 128 ಹುತಾತ್ಮರ ಹೆಸರುಗಳನ್ನು ಪ್ರಕಟಿಸಿ ಆ ಹುತಾತ್ಮರ ಚೇತನಗಳಿಗೆ ನಮನಗಳನ್ನು ಸಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.







