ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’
ನಾಡು-ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಅನನ್ಯ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಮಂಗಳೂರು : ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ನುಡಿಸಿರಿ ವಿರಾಸತ್ಗಳಲ್ಲದೆ ಇತರ ಹಲವಾರು ರಾಜ್ಯ-ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕರಾವಳಿ ಕರ್ನಾಟಕದ ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಜಗದಗಲ ಪಸರಿಸಿದೆ. ನಾಡು-ನುಡಿಯ ಸೇವೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳ ಪಾತ್ರ ಹಿರಿದು. ಅದು ಇತರ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯ ತುಳು ಸಂಘದ ಆಶ್ರಯದಲ್ಲಿ ನಡೆದ ‘ಸಿರಿಪರ್ಬ - 2025’ ತುಳು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾತ್ಮಕ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ.ಕುಕ್ಕುವಳ್ಳಿ ಅವರು ಸಿರಿಪರ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ‘ತುಳು ಸಾಂಸ್ಕೃತಿಕ ವೈಭವ’ ಅಂತರ್ ಕಾಲೇಜು ಸ್ಪರ್ಧೆಗೆ ಚಾಲನೆ ನೀಡಿದರು.
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಸಂಸ್ಥೆಯ ವಿದ್ಯಾರ್ಥಿಗಳಾದ ಹಾರ್ದಿಕ್ ಎಚ್.ಶೆಟ್ಟಿ, ಜೆವಿತಾ ಪೆರ್ಲ್ ಕ್ರಾಸ್ಟಾ, ಪ್ರಶಸ್ತಿ ಎಂ.ಎಸ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತುಳು ಚಲನಚಿತ್ರ ನಟ ಮತ್ತು ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ಆಳ್ವಾಸ್ ಇನ್ಟ್ಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ, ಶಿಕ್ಷಕ - ಕಲಾವಿದ ಬಾಲಕೃಷ್ಣ ರೇಖ್ಯ ಮುಖ್ಯ ಅತಿಥಿಗಳಾಗಿದ್ದರು. ಉಪನ್ಯಾಸಕ ಹೇಮಂತ್ ಸುವರ್ಣ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಆಕರ್ಷಕ ಶೋಭಾಯಾತ್ರೆ - ವಸ್ತು ಪ್ರದರ್ಶನ :
ಸಮಾರಂಭದಲ್ಲಿ ತುಳುನಾಡಿನ ಜಾನಪದ ಸಂಸ್ಕೃತಿಗೆ ಪೂರಕವಾದ ಯಕ್ಷಗಾನ, ಚೆಂಡೆ ವಾದನ, ಕಂಬಳದ ಕೋಣಗಳು, ಕುಣಿತ ಭಜನೆ, ದಫ್ ಕುಣಿತಗಳನ್ನೊಳಗೊಂಡ ವರ್ಣರಂಜಿತ ಶೋಭಾಯಾತ್ರೆ ನಡೆಯಿತು. ತುಳು ಬದುಕಿನ ಭೌತಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಪಾರಂಪರಿಕ ವಸ್ತುಗಳು, ದಿನಬಳಕೆಯ ಸಾಮಾನು, ಕೃಷಿ ಉಪಕರಣಗಳು, ಆಭರಣ, ಹಸ್ತ ಕಲಾಕೃತಿ, ಶಿಲ್ಪ ವೈವಿಧ್ಯ ,ಭೂತಕೋಲ, ನಾಗಾರಾಧನೆ, ಸಂಗೀತ ವಾದ್ಯ, ಯಂತ್ರೋಪಕರಣಗಳು ಸೇರಿದಂತೆ ವೈವಿಧ್ಯಮಯ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸ್ಪರ್ಧಾ ಫಲಿತಾಂಶ :
ದಿನವಿಡೀ ನಡೆದ ಸ್ಪರ್ಧೆಯಲ್ಲಿ ಜಿಎಫ್ಜಿಸಿ ವಾಮದಪದವು, ಮಹಾವೀರ ಕಾಲೇಜು ಮೂಡಬಿದಿರೆ, ಎಸ್ಡಿಎಂ ಪಿಜಿ ಸೆಂಟರ್, ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಶ್ರೀ ಧವಳ ಕಾಲೇಜು, ಆಳ್ವಾಸ್ ಪದವಿ ಕಾಲೇಜು ಮುಂತಾದ ತಂಡಗಳು ಭಾಗವಹಿಸಿದ್ದವು. ಪ್ರತೀ ತಂಡವೂ ತುಳುನಾಡಿನ ಪುರಾತನ ಆಚರಣೆಗಳು, ಜಾನಪದ ಚರಿತ್ರೆ, ಆರಾಧನಾ ಪರಂಪರೆ, ಹಾಡು - ಕುಣಿತಗಳನ್ನೊಳಗೊಂಡ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಕಲಾತ್ಮಕವಾಗಿ ರೂಪಿಸಿ ಪ್ರಸ್ತುತಪಡಿಸಿದವು. ಶ್ರೀ ಧವಳ ಕಾಲೇಜು ಮೂಡಬಿದಿರೆ ಪ್ರಥಮ, ಆಳ್ವಾಸ್ ಪದವಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ವಿದ್ಯಾರ್ಥಿ ನಾಯಕ ದೀಕ್ಷಿತ್ ಡಿ.ಶೆಟ್ಟಿ ಸ್ವಾಗತಿಸಿ, ನಿರೀಕ್ಷಾ ರೈ ವಂದಿಸಿದರು. ರಿಶಾಂಕ್ ತೋಡಾರ್ ಮತ್ತು ಅಜೇಯ್ ಕಾರ್ಯಕ್ರಮ ನಿರೂಪಿಸಿದರು.