'ಸೌಹಾರ್ದ ನಡಿಗೆ' ಕಾರ್ಯಕ್ರಮದ ಭಾಷಣದ ಹಿನ್ನೆಲೆ: ಸ್ಪೀಕರ್ ಖಾದರ್ ಗೆ ಬಹಿರಂಗ ಪತ್ರ ಬರೆದ ಎಸ್ಸೆಸ್ಸೆಫ್ ರಾಜ್ಯ ಸಮಿತಿ
ಚರ್ಚೆಗೆ ದಿನಾಂಕ ಗೊತ್ತುಪಡಿಸಲು, ಹೇಳಿಕೆ ಹಿಂಪಡೆಯಲು ಆಗ್ರಹ

ಮಂಗಳೂರು: ಎಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿದ್ದ 'ಸೌಹಾರ್ದ ನಡಿಗೆ' ಕಾರ್ಯಕ್ರಮದ ಸಮಾರೋಪದಲ್ಲಿ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ತನ್ನ ಭಾಷಣದಲ್ಲಿ ಎಸ್ಸೆಸ್ಸೆಫ್ ಬಗ್ಗೆ ಪ್ರಸ್ತಾಪಿಸಿದ ಕೆಲವು ವಿಷಯಗಳು ಇದೀಗ ತೀವ್ರ ಚರ್ಚೆಗೆ ಕಾರಣವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಮಧ್ಯೆ ಸ್ಪೀಕರ್ ಪ್ರಸ್ತಾಪಿಸಿದ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಸೆಸ್ಸೆಫ್ ರಾಜ್ಯ ಸಮಿತಿಯು ಶನಿವಾರ ಸ್ಪೀಕರ್ ಖಾದರ್ ಗೆ ಬರೆದ ಪತ್ರವೊಂದು ಬಹಿರಂಗಗೊಂಡಿದ್ದು, ಭಾಷಣದಲ್ಲಿ ಉಲ್ಲೇಖಿಸಿರುವ ವಿಷಯದ ಕುರಿತು ಚರ್ಚೆಗೆ ಸಿದ್ಧ, ದಿನಾಂಕ ಗೊತ್ತುಪಡಿಸಿ ಎಂದು ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಎಸ್ಸೆಸ್ಸೆಫ್ ಆಯೋಜಿಸಿದ್ದ 'ಸೌಹಾರ್ದ ನಡಿಗೆ' ಕಾರ್ಯಕ್ರಮದ ಸಮಾರೋಪದಲ್ಲಿ ತಾವು ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿರುವ ವಿಷಯವು ಆಕ್ಷೇಪಾರ್ಹವಾಗಿದೆ. ನಮ್ಮ ಸಂಘಟನೆಯ ಕಾರ್ಯಕರ್ತರಲ್ಲಿ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ತಪ್ಪು ಸಂದೇಶವನ್ನು ನೀವು ಕೊಟ್ಟಿದ್ದೀರಿ. ಅದರಿಂದ ಸಂಘಟನೆಯ ಕಾರ್ಯಕರ್ತರು ಆಕ್ರೋಶಿತರಾಗಿದ್ದಾರೆ ಎಂದು ಈ ಮೂಲಕ ತಮಗೆ ತಿಳಿಸಲು ಬಯಸುತ್ತೇವೆ. ಈ ಸಮುದಾಯದ ಮಾನ ಕಳೆಯುವ ಯಾವ ಕೃತ್ಯವನ್ನೂ ಮಾಡಿಲ್ಲ ಎಂಬ ಖಚಿತತೆ ನಮಗೆ ಇರುವುದರಿಂದ ತಾವು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವುದು ಪ್ರಜೆಗಳ ಕರ್ತವ್ಯವಾಗಿದೆ. ನಮ್ಮ ಸಂಘಟನೆಯ ಕಾರ್ಯಕರ್ತರು ಅಥವಾ ಬೆಂಬಲಿಗರು ರಾಜಕಾರಣಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದರೆ ಅದು ಅವರ ಸಾಮಾಜಿಕ ಬದ್ಧತೆಯಾಗಿದೆ. ಜಾತ್ಯತೀತರು ಎಂದು ಕರೆಸಿಕೊಳ್ಳುವ ಜವಾಬ್ದಾರಿಯುತ ಜನಪ್ರತಿನಿಧಿಗಳು ಕೋಮುಸಂಘರ್ಷ ಸಂದರ್ಭ ಮೃದು ಧೋರಣೆ ತಾಳಿದಾಗ ಸಹಜವಾಗಿ ನಮ್ಮ ಕಾರ್ಯಕರ್ತರು ಪ್ರಶ್ನಿಸಿರಬಹುದು. ಹಾಗೇ ಪ್ರಶ್ನಿಸುವುದರಿಂದ ನಮ್ಮ ಸಂಘಟನೆಯ ಘನತೆಗೆ ಧಕ್ಕೆಯಾಗುತ್ತದೆ ಎಂಬರ್ಥದ ನಿಮ್ಮ ಮಾತುಗಳು ಅತ್ಯಂತ ಬಾಲಿಶವಾಗಿದೆ ಎಂದು ನೇರವಾಗಿ ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಹೇಳಲಾಗಿದೆ.
ನೀವು ಅತ್ಯುನ್ನತ ಹುದ್ದೆಯಲ್ಲಿರುವ ಸಂದರ್ಭ ನಿಮ್ಮದೇ ತವರು ಜಿಲ್ಲೆಯಲ್ಲಿ ದ್ವೇಷ ಭಾಷಣ ಮಾಡಿದವರು, ಪ್ರತೀಕಾರಕ್ಕೆ ಬಹಿರಂಗ ಕರೆಕೊಟ್ಟವರು, ಕೊಲೆಗಾರರು ರಾಜಾರೋಷವಾಗಿ ಮೆರೆಯುತ್ತಿರುವುದರಿಂದ ನಿಮ್ಮ ಘನತೆಗೆ ಧಕ್ಕೆಯಾಗಿದೆ ಎಂಬುದನ್ನು ಗಮನಕ್ಕೆ ತರುತ್ತಿದ್ದೇವೆ. ಸಮುದಾಯಕ್ಕೆ ಅಭದ್ರತೆ ಕಾಡಿದಾಗ ನಿಮ್ಮ ಮತದಾರರು, ನಿಮ್ಮಿಂದ ನ್ಯಾಯ ಬಯಸುವವರು ನಿಮ್ಮನ್ನು ಪ್ರಶ್ನಿಸಿದರೆ ಅದರಲ್ಲೇನು ತಪ್ಪಿದೆ? ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುತ್ಸದ್ದಿತನ ತೋರಬೇಕಾದವರು ತಾವು ಎಂಬುದನ್ನು ನೆನಪಿಸಬಯಸುತ್ತೇವೆ. ವೇದಿಕೆಗೆ ಸೂಕ್ತವಲ್ಲದ ಮತ್ತು ಅನಗತ್ಯ ವಿಷಯಗಳನ್ನು ಎಳೆದು ತಂದು ಸಂಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪು ತಿಳುವಳಿಕೆ ಮೂಡಿಸಿದ ನಿಮ್ಮ ಮಾತುಗಳಿಗೆ ಸಂಘಟನೆಯ ತೀವ್ರ ಆಕ್ಷೇಪವಿದೆ.
ನಮ್ಮ ಸಂಘಟನೆಯವರು ಯಾವುದೇ ದ್ವೇಷ ಭಾಷಣ ಮಾಡಿದವರಲ್ಲ. ಪ್ರತೀಕಾರದ ಬೆದರಿಕೆ ಹಾಕಿದವರಲ್ಲ. ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಯಾವುದೇ ಸಭೆ, ಸಮಾರಂಭ ಮಾಡಿದವರಲ್ಲ. ತಮ್ಮನ್ನು ಯಾರು ಯಾವ ವಿಷಯದಲ್ಲಿ ಪ್ರಶ್ನಿಸಿದ್ದಾರೆ? ಆ ಬಗ್ಗೆ ವಸ್ತುನಿಷ್ಠ ಚರ್ಚೆಗೆ ಬರುವುದಾಗಿಯೂ ಹೇಳಿದ್ದೀರಿ. ಚರ್ಚೆಗೆ ದಿನಾಂಕ ನಿಗದಿಪಡಿಸಬೇಕಾಗಿ ಕೋರುವೆವು. ನಿಮ್ಮ ಬಗ್ಗೆ ಮುಸ್ಲಿಮ್ ಸಮುದಾಯಕ್ಕಿರುವ ಅಸಮಾಧಾನಗಳೇನು ಎಂಬ ಪಟ್ಟಿಯನ್ನು ನಿಮ್ಮ ಮುಂದಿಡಲು ಸಿದ್ಧರಿದ್ದೇವೆ. ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯೊಂದಿಗೆ... ಎಂಬ ಒಕ್ಕಣೆಯುಳ್ಳ ಎಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಮುಹಮ್ಮದ್ ಸುಫ್ಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಬಿ. ಮುಹಮ್ಮದ್ ಅಲಿ ತುರ್ಕಳಿಕೆ, ಫೈನಾನ್ಸ್ ಕಾರ್ಯದರ್ಶಿ ಇರ್ಷಾದ್ ಹಾಜಿ ಗೂಡಿನಬಳಿ ಅವರ ಹೆಸರಿನಲ್ಲಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೊತೆಗೆ ಚರ್ಚೆಯನ್ನು ಹುಟ್ಟು ಹಾಕಿದೆ.
ಸ್ಪೀಕರ್ ಭಾಷಣದಲ್ಲಿ ಹೇಳಿದ್ದೇನು?:
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಫ್ 'ಸೌಹಾರ್ದ ನಡಿಗೆ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ರಾಜ್ಯ ವಿಧಾನಸಭೆಯ ಸ್ಪೀಕರ್, "ಎಸ್ಸೆಸ್ಸೆಫ್ ಅನ್ನು ಗೌರವಯುತ ಸಂಘಟನೆಯನ್ನಾಗಿ ರೂಪಿಸುವಲ್ಲಿ ಬಹಳಷ್ಟು ಜನರ ಶ್ರಮ ಇದೆ. ಇದೀಗ 3-4 ಜನರಿಂದಾಗಿ ಸಂಘಟನೆಯ ಮಾನ-ಮರ್ಯಾದೆ ಕಳೆಯುವಂತಹ ಕೆಲಸ ಆಗಬಾರದು. ಅದಕ್ಕೆ ಅವಕಾಶ ಕೂಡಾ ನೀಡಬಾರದು. ಪ್ರತಿಯೊಬ್ಬರಿಗೂ ಈ ಬಗ್ಗೆ ಜವಾಬ್ದಾರಿ ಇದೆ. ಈ ಬಗ್ಗೆ ಆಲೋಚನೆ ಮಾಡಬೇಕು. ಒಂದಿಬ್ಬರು, ಮೂವರಿಂದ ಸಂಘಟನೆಗೆ ಕಪ್ಪುಚುಕ್ಕೆ ಉಂಟಾಗಲು ಅವಕಾಶ ನೀಡಬಾರದು ಎಂದು ವಿನಂತಿಸುತ್ತೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂತಿದ್ದರೆ ಚರ್ಚೆಗೂ ತಾನು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ. ಅವರ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.