ನೇಕಾರ ಸಂಜೀವ ಶೆಟ್ಟಿಗಾರ್ ರಿಗೆ ರಾಜ್ಯ ಪ್ರಶಸ್ತಿ

ಮಂಗಳೂರು, ಆ.6: ಪರಿಣಿತ ಉಡುಪಿ ಸೀರೆ ನೇಕಾರ ಸಂಜೀವ ಶೆಟ್ಟಿಗಾರ್ ಅವರು ರಾಜ್ಯದ ಕೈ ಮಗ್ಗ ಮತ್ತು ಜವಳಿ ಇಲಾಖೆ ನೀಡುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹತ್ತಿ ಬಟ್ಟೆ ಸೀರೆ ನೇಯ್ಗೆಯಲ್ಲಿ ಸಂಜೀವ ಶೆಟ್ಟಿಗಾರ್ ಅವರಿಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಬಂದಿದೆ ಲಭಿಸಿದೆ.
ಸೋಮವಾರ(ಆ.7) ರಾಷ್ಟ್ರೀಯ ಕೈಮಗ್ಗ ದಿನಾಚರಣೆ ದಿನದಂದು ಬೆಂಗಳೂರಿನಲ್ಲಿ ಅವರು ರಾಜ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ತಾಳಿಪಾಡಿ ನೇಕಾರರ ಸಂಘದ ಸದಸ್ಯರಾಗಿರುವ 74 ವಯಸ್ಸಿನ ಸಂಜೀವ ಶೆಟ್ಟಿಗಾರ್ ಈಗ ಇರುವ ಕೇವಲ ಹತ್ತು 80 ಕೌಂಟ್ ನೇಕಾರರಲ್ಲಿ ಒಬ್ಬರು. ಕೈಯಿಂದ ಚಂದದ ಬುಟ್ಟಾ ನೇಯುವಲ್ಲಿ ಪರಿಣಿತರು. 80 ಕೌಂಟ್ ನ ಸಹಜ ಸೀರೆ ನೇಯ್ದ ಮೊದಲಿಗರಾಗಿದ್ದಾರೆ.
ಕದಿಕೆ ಟ್ರಸ್ಟ್ ಇಪ್ಪತ್ತು ವರ್ಷದ ನಂತರ ಗೋಪಿನಾಥ್ ಶೆಟ್ಟಿಗಾರ್ ನೆರವಿನಲ್ಲಿ ಪರಿಚಯಿಸಿದ ಇಕತ್ ಸೀರೆಯನ್ನು ಮೊದಲು ನೇಯ್ದ ಹೆಗ್ಗಳಿಕ ಸಂಜೀವ ಶೆಟ್ಟಿಗಾರ್ ಅವರದು. ನೇಕಾರಿಕೆ ಮತ್ತು ಅದರ ಪೂರ್ವ ತಯಾರಿಕೆಯ ಕೆಲಸದಲ್ಲಿ ಅತ್ಯಾಪೂರ್ವ ಪರಿಣತಿ ಹೊಂದಿರುವ ಸಂಜೀವ ಶೆಟ್ಟಿಗಾರ್, ಎರಡು ಹಾಸುಗಳನ್ನು ಒಂದೇ ಕೈಯಿಂದ ಜೋಡಿಸುವ ಅಪರೂಪದ ಕುಶಲತೆ ಹೊಂದಿದ್ದಾರೆ. 72ರ ಹರೆಯದಲ್ಲೂ ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ಶೈಲಿಯ ಸೀರೆಗಳನ್ನು ಬಣ್ಣಗಳನ್ನು ಸರಿಯಾಗಿ ಹೊಂದಿಸಿ ನೇಯಬಲ್ಲರು. ಒಂದೇ ಹಾಸಿನಲ್ಲಿ ವಿವಿಧ ವಿನ್ಯಾಸದ ಸೀರೆ ನೆಯಬಲ್ಲರು.
ಕದಿಕೆ ಟ್ರಸ್ಟ್ ಆರಂಭಿಸಿದ ಉಡುಪಿ ಸೀರೆ ಉಳಿಸಿ ಅಭಿಯಾನದ ನಂತರ ತಾಳಿಪಾಡಿ ನೇಕಾರರ ಸಂಘವನ್ನು ಸೇರಿದ ಸಂಜೀವ ಶೆಟ್ಟಿಗಾರ್ ಅನೇಕ ವರ್ಷಗಳ ಕಾಲ ಉಡುಪಿ ನೇಕಾರರ ಸಂಘದಲ್ಲಿ ಸೇವೆ ಸಲ್ಲಿಸಿದ್ದರು ಎಂದು ಕದಿಕೆ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.







