ದ.ಕ.ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯದ ಸಮೀಕ್ಷೆ

ಮಂಗಳೂರು, ಸೆ.23: ದ.ಕ.ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಯ ಗಣತಿ ಕಾರ್ಯವು ಮಂಗಳವಾರವೂ ಪೂರ್ಣಪ್ರಮಾಣದಲ್ಲಿ ನಡೆದಿಲ್ಲ. ಸೋಮವಾರ ತಾಂತ್ರಿಕ ಸಮಸ್ಯೆಯಿಂದ ಸಮೀಕ್ಷೆ ನಡೆದಿ ರಲಿಲ್ಲ. ಮಂಗಳವಾರದಿಂದ ಸುಸೂತ್ರವಾಗಿ ನಡೆಯಬಹುದು ಎಂಬ ವಿಶ್ವಾಸ ವ್ಯಕ್ತವಾಗಿದ್ದರೂ ಕೂಡ ನಿರೀಕ್ಷೆ ಯಂತೆ ಸಮೀಕ್ಷೆ ನಡೆದಿಲ್ಲ ಎಂದು ತಿಳಿದು ಬಂದಿದೆ.
ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ಶಿಕ್ಷಣ ವಲಯ ವ್ಯಾಪ್ತಿಯಲ್ಲಿ ಬೆರಳೆಣಿಕೆಯ ಸಿಬ್ಬಂದಿಗಳು ಮಾತ್ರ ಗಣತಿ ಕಾರ್ಯ ನಡೆಸಿದ್ದಾರೆ. ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಲಯ ವ್ಯಾಪ್ತಿಯಲ್ಲಿ ಗಣತಿ ಕಾರ್ಯವು ಸೋಮವಾರ ಮತ್ತು ಮಂಗಳವಾರ ನಡೆದಿಲ್ಲ. ಬುಧವಾರ ನಡೆಯುವ ನಿರೀಕ್ಷೆ ಇದೆ.
ಈ ಮಧ್ಯೆ ಜಿಲ್ಲೆಯಲ್ಲಿ ಗಣತಿ ಕಾರ್ಯ ನಡೆಸಲು ಶಿಕ್ಷಕರ ನೇಮಕ ಹಾಗೂ ಇತರ ಸಿಬ್ಬಂದಿ ನಿಯೋಜನೆ ವಿಚಾರದಲ್ಲಿ ಗೊಂದಲ ಉಂಟಾಗಿದೆ ಎನ್ನಲಾಗಿದೆ. ಕೆಲವು ಕಡೆಗಳಲ್ಲಿ ಇನ್ನೂ ಕೂಡ ಶಿಕ್ಷಕರಿಗೆ ಮನೆ ಪಟ್ಟಿಯೇ ನೀಡಿಲ್ಲ. ಗಣತಿ ಕಿಟ್ ಕೂಡ ನೀಡಿಲ್ಲ. ಕೆಲವರಿಗೆ ಅಧಿಕ ಮನೆಗಳ ಲಿಸ್ಟ್ ತೋರಿಸಲಾಗಿದೆ. ಆರೋಗ್ಯ ಹದಗೆಟ್ಟ ಶಿಕ್ಷಕರನ್ನು ಗಣತಿ ಕಾರ್ಯದಿಂದ ಕೈಬಿಡುವಂತೆ ಒತ್ತಾಯಿಸಿದ್ದರೂ ಕೂಡ ಅದನ್ನು ಪಾಲಿಸಿಲ್ಲ ಎಂಬ ದೂರುಗಳು ಕೇಳಿಬಂದಿದೆ.
ಮಂಗಳೂರು ದಕ್ಷಿಣ ವಲಯ ಸಹಿತ ಕೆಲವು ಕಡೆ ಶಿಕ್ಷಕರಿಗೆ ಬಿಎಲ್ಒ ಮತ್ತು ಗಣತಿ ಕಾರ್ಯವನ್ನು ಜತೆಯಾಗಿ ಹಾಕಿರುವುದರಿಂದ ಶಿಕ್ಷಕರು ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೆ ಕೆಲವು ಸರಕಾರಿ ಶಾಲೆಯ ಅತಿಥಿ ಶಿಕ್ಷಕರನ್ನು ಗಣತಿಗೆ ಬಳಸಿಕೊಳ್ಳಲು ಮುಂದಾಗಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.
ಆರಂಭದಲ್ಲಿ ಶಾಲಾ ವ್ಯಾಪ್ತಿಯ 8 ಕಿ.ಮೀ ಅಂತರದಲ್ಲಿ ಶಿಕ್ಷಕರಿಗೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಇದೀಗ ಎಲ್ಲೆಲ್ಲೋ ನಿಯೋಜಿಸಿ ಶಿಕ್ಷಕರ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ನೇಮಕಾತಿ ಆದೇಶವೂ ಇಲ್ಲದೆ ಸಮೀಕ್ಷೆಗೆ ನಿಯೋಜಿಸಿದ ಬಗ್ಗೆಯೂ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗಿನ್ನೂ ಹಾಜರಾತಿ ಪ್ರಮಾಣಪತ್ರ ಕೊಟ್ಟಿಲ್ಲ. ಅದನ್ನು ಇಲಾಖೆಗೆ ಸಲ್ಲಿಸಿದರೆ ಗಳಿಕೆ ರಜೆ ಸಿಗುತ್ತದೆ. ತರಬೇತಿಗೆ ಬನ್ನಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಸಂದೇಶ ಬರುತ್ತದೆ. ಆದರೆ ಹಾಜರಾತಿ ಪತ್ರ ಸಿಗದಿದ್ದರೆ ಸಮೀಕ್ಷೆಗೆ ಹೇಗೆ ಮುಂದಾಗುವುದು ಎಂದು ಕೆಲವು ಶಿಕ್ಷಕರು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ನಡೆಸಿದ ಒಳಮೀಸಲಾತಿ ಸಮೀಕ್ಷೆಯ ಗೌರವಧನವನ್ನು ಇನ್ನೂ ಕೊಟ್ಟಿಲ್ಲ. ಹಾಜರಾತಿ ಪ್ರಮಾಣಪತ್ರ ವನ್ನೂ ನೀಡಿಲ್ಲ. ಸಂಘಟನೆಯ ಮೂಲಕ ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದೇವೆ. ಆದರೂ ಪ್ರಯೋಜನ ಆಗಲಿಲ್ಲ ಎಂದು ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಸಾಮೂಹಿಕ ವಾಗಿ ಗಣತಿ ಕಾರ್ಯ ಇನ್ನೂ ಆರಂಭ ಆಗಿಲ್ಲ. ಬೆರಳೆಣಿಕೆ ಮಂದಿ ಮಾತ್ರ ಗಣತಿಕಾರ್ಯ ನಡೆಸಿದ್ದಾರೆ. ಹಲವು ಶಿಕ್ಷಕರಿಗೆ ಇನ್ನೂ ಮನೆಪಟ್ಟಿ ಸಿಕ್ಕಿಲ್ಲ. ಹಾಗಾಗಿ ಮನೆ ಭೆಟಿ ಮಾಡಲೂ ಆಗುತ್ತಿಲ್ಲ. ಒಬ್ಬರು ಶಿಕ್ಷಕರಿಗೆ 150 ಮನೆ ಎಂದು ಆರಂಭದಲ್ಲಿ ಹೇಳಿದ್ದರು. ಈಗ ಕೆಲವರಿಗೆ 270 ಮನೆಯ ಪಟ್ಟಿ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಡಿಸಿ ತುರ್ತು ಸಭೆ
ಮಂಗಳವಾರವೂ ಗಣತಿ ಕಾರ್ಯ ಸಂಪೂರ್ಣವಾಗಿ ನಡೆಯದ ಕಾರಣ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಂಗಳವಾರ ಸಂಜೆ ತುರ್ತು ಸಭೆ ನಡೆಸಿ ತಾಂತ್ರಿಕ ಸಮಸ್ಯೆ ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.







