ತುಳು ಕಲೆ, ಭಾಷೆ ,ಸಂಸ್ಕೃತಿಗೆ ವೇದಿಕೆ ಕಲ್ಪಿಸಲು "ತುಳುಕೂಟ ಬಹರೈನ್" ಚಾಲನೆ

ಬಹರೈನ್, ಸೆ.19: ಬಹರೈನ್ ದ್ವೀಪ ರಾಷ್ಟ್ರದಲ್ಲಿ ತುಳು ಕಲೆ, ಭಾಷೆ , ಸಂಸ್ಕೃತಿಗೆ ವೇದಿಕೆಯನ್ನು ಕಲ್ಪಿಸಿ ಆಮೂಲಕ ತುಳು ಕಲೆ,ಭಾಷೆ, ಸಂಸ್ಕ್ರತಿಯನ್ನು ದ್ವೀಪದಲ್ಲಿ ಉಳಿಸಿ ಬೆಳೆಸಲಿಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ "ತುಳುಕೂಟ ಬಹರೈನ್ " ಸಂಘಟನೆಗೆ ಸೋಮವಾರ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯರು "ತುಳುಕೂಟ ಬಹರೈನ್"ಗೆ ಚಾಲನೆ ನೀಡಿದರು. ದ್ವೀಪರಾಷ್ಟ್ರದಲ್ಲಿ ಸುಮಾರು ನಾಲ್ಕು ದಶಕಗಳಿಂದ ಕನ್ನಡ ತುಳು ಭಾಷೆ, ಸಂಸ್ಕೃತಿಯ ಸೇವೆಯನ್ನು ನಿರಂತರಾಗಿರುವ ಸಮಾನ ಮನಸ್ಕ ಹಿರಿಯ ಕನ್ನಡಿಗರಾದ ರಾಜ್ ಕುಮಾರ್, ಆಸ್ಟಿನ್ ಸಂತೋಷ್, ವಿಜಯ ನಾಯಕ್ ಹಾಗೂ ರಾಜೇಶ್ ಶೆಟ್ಟಿಯವರ ನೇತೃತ್ವದಲ್ಲಿ "ತುಳುಕೂಟ ಬಹರೈನ್" ಚಾಲನೆ ನೀಡಲಾಯಿತು.
ಕನ್ನಡ ಸಂಘದ ಮಾಜಿ ಅಧ್ಯಕ್ಷ ಹಾಗೂ ಇಂಡಿಯನ್ ಸ್ಕೂಲ್ ನಲ್ಲಿ 1989ರಲ್ಲಿ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ಕಾರಣರಾಗಿದ್ದ ಸುರೇಂದ್ರ ಶೆಟ್ಟಿ, ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಶನ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್, ಬಹರೇನ್ ಬಂಟ್ಸ್ ನ ಮಾಜಿ ಅಧ್ಯಕ್ಷರಾದ ಭರತ್ ಶೆಟ್ಟಿ, ಅಲ್ ಹಿಲಾಲ್ ವೈದ್ಯಕೀಯ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ರಾದ ಆಸೀಫ್, ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನ್ ದಾಸ್ ರೈ, ವಿಶ್ವಕರ್ಮ ಬಳಗದ ಅಧ್ಯಕ್ಷರಾದ ಸತೀಶ್ ಉಳ್ಳಾಲ್, ಕೊಂಕಣ್ ಸಿಂಗರ್ಸ್ ನ ಮಾಜಿ ಅಧ್ಯಕ್ಷ ವಾಲ್ಟರ್ ನೊರೊನ್ಹಾ, ಹಿರಿಯ ಕನ್ನಡಿಗರಾದ ಹುಂತ್ರಿಕೆ ಭಾಸ್ಕರ್ ಶೆಟ್ಟಿ, ಚಂದ್ರಹಾಸ ಐಲ್, ರಾಬರ್ಟ್ ಡಿ' ಸೋಜಾ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿ, ಶುಭಹಾರೈಸಿದರು.
ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು "ತುಳುಕೂಟ ಬಹರೈನ್" ನ ಸಂಘಟಕರಿಗೆ ಹಾಗೂ ಬಹರೈನ್ ತುಳುವರಿಗೆ ಶುಭ ಹಾರೈಸಿ ಕಳುಹಿಸಿದ್ದ ಸಂದೇಶ ಹಾಗೂ ಆಶೀರ್ವಚನದ ವಿಡಿಯೋವನ್ನು ಇದೇ ಸಂದರ್ಭ ಪ್ರಸಾರ ಮಾಡಲಾಯಿತು.
ತುಳುಕೂಟದ ಚೊಚ್ಚಲ ಕಾರ್ಯಕ್ರಮವಾಗಿ ಮುಂದಿನ ಅಕ್ಟೊಬರ ತಿಂಗಳ 13ರಂದು ತುಳುನಾಡಿನಲ್ಲಿ ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಹರಿಪ್ರಸಾದ್ ರೈ ನಿರ್ಮಾಣದ , ತ್ರಿಶೂಲ್ ಶೆಟ್ಟಿ ನಿರ್ದೇಶನದ ವಿನೀತ್ ಕುಮಾರ್, ಸಮತಾ ಅಮೀನ್ ಮುಖ್ಯ ಭೂಮಿಕೆಯಲ್ಲಿರುವ "ಪುಳಿಮುಂಚಿ" ತುಳು ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನವನ್ನು ತುಳುಕೂಟ ಬಹರೈನ್ ಏರ್ಪಡಿಸಿದ್ದು, ಅದರ ಅಂಗವಾಗಿ ಇದೇ ಸಂದರ್ಭ ಚಲನಚಿತ್ರದ ಪೋಸ್ಟರನ್ನು ಅನಾವರಣಗೊ ಳಿಸಲಾಯಿತು. ಕಾರ್ಯಕ್ರಮವನ್ನು ವಿಜಯ್ ನಾಯಕ್ ನಿರೂಪಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.