ಉಪ್ಪಿನಂಗಡಿ | ಸಮಗ್ರ ಕೃಷಿಯೊಂದಿಗೆ ಸ್ವಾವಲಂಬಿಗಳಾಗೋಣ: ಸಂಜೀವ ಮಠಂದೂರು

ಉಪ್ಪಿನಂಗಡಿ: ಪ್ರಾಕೃತಿಕ ವೈಪರೀತ್ಯದಿಂದಾಗಿ ಕೃಷಿಕರ ಬದುಕು ಕಷ್ಟಕರವಾಗತೊಡಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿ ಕೃಷಿಕನಾಗಬೇಕು, ಹಾಗಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಮತ್ತು ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕೃಷಿ ಪದ್ಧತಿ ವ್ಯವಸ್ಥೆಯಿಂದ ನಾವು ಹೊರ ಬರಬೇಕಾಗಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಳು ಮೆಣಸು, ಕಾಫಿ ಜೊತೆಗೆ ತರಕಾರಿ ಮೊದಲಾದ ಉಪ ಕೃಷಿಯೊಂದಿಗೆ ಸ್ವಾವಲಂಬಿ ಕೃಷಿಕನಾಗಬೇಕು ಎಂದರು.
ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಪಿ.ಎನ್.ಮಾತನಾಡಿ, ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರ ಒಳಿತಿನ ಸಲುವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಕೃಷಿಕರಿಗೆ ಸಹಕಾರಿ ಆಗಲಿದೆ. ನಾವುಗಳು ಹಟ್ಟಿ ಗೊಬ್ಬರ, ನೈಸರ್ಗಿಕ ಗೊಬ್ಬರಕ್ಕೆ ಹೆಚ್ಚು ಒತ್ತು ಕೊಡುವಂತಾಗಬೇಕು ಎಂದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ವಿಜ್ಞಾನಿ ಡಾ. ಭವಿಷ್ ಅಡಿಕೆ ಕೃಷಿಯಲ್ಲಿ ಗೊಬ್ಬರದ ಬಳಕೆ, ಸೂಕ್ಷ್ಮ ಪೋಷಕಾಂಶದ ಸಮಗ್ರ ನಿರ್ವಹಣೆ ಹಾಗೂ ರೋಗಗಳ ಹತೋಟಿ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ:
ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಯು.ಎಲ್. ಉದಯಕುಮಾರ್, ಸಹಕಾರಿ ಸಂಘದ ವಳಾಲು ಶಾಲೆಯಲ್ಲಿ ಸುಮಾರು 20 ವರ್ಷಗಳಿಗೂ ಅಧಿಕ ಕಾಲ ಸಿಬ್ಬಂದಿಯಾಗಿ ಪ್ರಾಮಾಣಿಕತೆಯ ದ್ಯೋತಕದಂತಿದ್ದು, ನಿವೃತ್ತಿ ಹೊಂದಿರುವ ಇಸ್ಮಾಯಿಲ್ ನೀರಕಟ್ಟೆ ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರಾದ ಉಮೇಶ್, ರಾಜೇಶ್, ರಾಘವ ನಾಯ್ಕ್, ಶ್ರೀಮತಿ ಗೀತಾ, ಶ್ರೀಮತಿ ಸಂಧ್ಯಾ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಶ್ರೀರಾಮ, ಸುಂದರ ಕೆ., ಉಪ್ಪಿನಂಗಡಿ ತಾ.ಪಂ. ಮಾಜಿ ಸದಸ್ಯ ಮುಕುಂದ ಬಜತ್ತೂರು, ಸಂಘದ ಮಾಜಿ ಅಧ್ಯಕ್ಷ ಯಶವಂತ ಗೌಡ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಹಮ್ಮಬ್ಬ ಶೌಕತ್ ಅಲಿ, ನಿತಿನ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಪದ್ಮಾವತಿ, ಸಂಘದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೋಭಾ ಸ್ವಾಗತಿಸಿದರು. ವಳಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಸಂತ ಪಿಜಕ್ಕಳ ವಂದಿಸಿದರು. ಸಂಸ್ಥೆಯ ಪ್ರವೀಣ್ ಆಳ್ವ, ರವೀಶ್ ಕಾರ್ಯಕ್ರಮ ನಿರೂಪಿಸಿದರು.







