ಯುವಕರು ಸಂವಿಧಾನದ ಮೌಲ್ಯಗಳನ್ನು ಅರಿತುಕೊಳ್ಳಬೇಕಾಗಿದೆ : ಶಾಸಕ ಡಿ. ವೇದವ್ಯಾಸ ಕಾಮತ್

ಮಂಗಳೂರು, ನ.27:ಮಂಗಳೂರಿನ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಯುವನಿಕಾ ಫೌಂಡೇಶನ್ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ‘‘ಯುವ ಪೀಳಿಗೆ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ರಾಷ್ಟ್ರ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ’’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ತೊಳ್ಪಾಡಿ ಅವರು, ಸಂವಿಧಾನದ ಸಮಾಜಮುಖಿ ತತ್ವಗಳು ಮತ್ತು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಾಗರಿಕರ ಪಾತ್ರದ ಕುರಿತು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಫಾ. ಜಾನ್ ಡಿ ಸೋಜ ಎಸ್ ಜೆ ವಹಿಸಿದ್ದರು. ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರೋಷನ್ ಡಿ ಸೋಜ ಸ್ವಾಗತಿಸಿದರು.
ಕಾರ್ಯಕ್ರಮ ಸಂಯೋಜಕ ರಘುವೀರ್ ಸೂಟರ್ ಪೇಟೆ ಅವರು ಸಂವಿಧಾನ ದಿನಾಚರಣೆಯ ಪ್ರಾಮುಖ್ಯತೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಸಂಸ್ಥೆಯ ನೋಯೆಲ್ ಲೋಬೊ, ವಿಲ್ಸನ್ ಮತ್ತು ಪದ್ಮಾವತಿ ಅವರು ಕಾರ್ಯಕ್ರಮದ ಸುಗಮ ನಿರ್ವಹಣೆಯಲ್ಲಿ ಸಹಕರಿಸಿದರು. ಶ್ರೇಯಸ್ ವಂದಿಸಿದರು.
ಕಾರ್ಯಕ್ರಮದಲ್ಲಿ ಯುವನಿಕಾ ಫೌಂಡೇಶನ್ನ ಕೆ . ಕಸ್ತೂರಿ, ಸಂತೋಷ್ ಯಾದವ್ , ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹಿತೇಶ್ ಬಂಗೇರ ಉಪಸ್ಥಿತರಿದ್ದರು.







