ಅರುಣಾಚಲ ಅಪಘಾತದಲ್ಲಿ 19 ಮಂದಿ ಮೃತ್ಯು: ಬದುಕುಳಿದ ವ್ಯಕ್ತಿಯಿಂದ ಎರಡು ದಿನಗಳ ಬಳಿಕ ಮಾಹಿತಿ ಬಹಿರಂಗ

PC: x.com/the_hindu
ಗುವಾಹತಿ: ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ರಾತ್ರಿ 22 ಮಂದಿಯನ್ನು ಹೊತ್ತಿದ್ದ ಟ್ರಕ್ ಕಂದಕಕ್ಕೆ ಬಿದ್ದು ಸಂಭವಿಸಿದ ದುರಂತದಲ್ಲಿ ಬಹುಶಃ ಉಳಿದ ಏಕೈಕ ವ್ಯಕ್ತಿ ಅವಶೇಷಗಳ ಅಡಿಯಿಂದ ಎದ್ದು ಗಾಯದ ನಡುವೆಯೂ 200 ಮೀಟರ್ ಅಳದ ಕಂದಕದಿಂದ ಹೊರಬಂದು 4 ಕಿಲೋಮೀಟರ್ ತೆವಳಿಕೊಂಡು ಬುಧವಾರ ರಾತ್ರಿ ಬಿಆರ್ಓ ಕ್ಯಾಂಪ್ ತಲುಪಿ, ಘಟನೆ ನಡೆದ 48 ಗಂಟೆ ಬಳಿಕ ದುರಂತದ ಬಗ್ಗೆ ಮಾಹಿತಿ ನೀಡಿದ ಅಪರೂಪದ ಪ್ರಕರಣ ವರದಿಯಾಗಿದೆ.
ಗುರುವಾರ ಸಂಜೆವರೆಗೆ 19 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಇವರು ಚೀನಾ ಗಡಿ ಸಮೀಪದ ಅಂಜಾವ್ ಜಿಲ್ಲೆಯ ಕೆಲಸದ ಸ್ಥಳಕ್ಕೆ ಟ್ರಕ್ ನಲ್ಲಿ ಹೋಗುತ್ತಿದ್ದರು. ಹಯುಲಿಂಗ್- ಚಗ್ಲಗಮ್ ರಸ್ತೆಯಲ್ಲಿ ಅಪಘಾತಕ್ಕೀಡಾಯಿತು. ಉಳಿದ ಇಬ್ಬರು ಕಾರ್ಮಿಕರಿಗಾಗಿ ಸೇನಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.
ಟ್ರಕ್ ನಲ್ಲಿದ್ದ 22 ಮಂದಿಯ ಪೈಕಿ ಟ್ರಕ್ ಚಾಲಕನೂ ಸೇರಿದ್ದಾನೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಉಳಿದುಕೊಂಡಿರುವ ವ್ಯಕ್ತಿ ತೀವ್ರ ಗಾಯವಾಗಿರುವುದರಿಂದ ಹೆಚ್ಚಿನ ವಿವರ ನೀಡುವ ಸ್ಥಿತಿಯಲ್ಲಿಲ್ಲ. ಗಾಯಾಳುವನ್ನು ಹಯುಲಿಯಾಂಗ್ ನಿಂದ 260 ಕಿಲೋಮೀಟರ್ ದೂರದ ದಿಬ್ರೂಗಢ ವೈದ್ಯಕೀಯ ಕಾಲೇಜು ಮತ್ತ ಆಸ್ಪತ್ರೆಗೆ ಸೇರಿಸಲಾಗಿದೆ.
ಅಂಜವ್ ಜಿಲ್ಲಾ ವಿಕೋಪ ನಿರ್ವಹಣಾ ಇಲಾಖೆಯ ಮುಖ್ಯಸ್ಥ ನಂಗ್ ಚಿಂಗ್ನಿ ಚೌಪೂ ಅವರ ಪ್ರಕಾರ, ಸೇನಾ ತಂಡಗಳು 200 ಮೀಟರ್ ಆಳದ ಕಂದಕಕ್ಕೆ ಇಳಿಯಲು ರೋಪ್ ಬಳಸಬೇಕಾಯಿತು. ಪತ್ತೆಯಾಗಿರುವ 19 ದೇಹಗಳನ್ನು ಇನ್ನೂ ಮೇಲಕ್ಕೆ ತರಲು ಸಾಧ್ಯವಾಗಿಲ್ಲ.
ದೇಹವನ್ನು ಮೇಲೆತ್ತಲು ಅಗತ್ಯವಾದ ಉಪಕರಣಗಳು ಸೇನಾ ಸಿಬ್ಬಂದಿ ಬಳಿ ಇಲ್ಲದ ಕಾರಣ ದಿಬ್ರೂಗಢದಿಂದ ಎನ್ಡಿಆರ್ಎಫ್ ತಂಡವನ್ನು ಅಗತ್ಯ ಸಲಕರಣೆಗಳೊಂದಿಗೆ ಕರೆಸಲಾಗಿದೆ ಎಂದು ಮೂಲಗಳು ಹೇಳಿವೆ.







