ವಿದ್ಯಾರ್ಥಿನಿ ಸಲ್ಲಿಸಿದ ಆರ್ಟಿಐ ಅರ್ಜಿಯಲ್ಲಿ ಬಯಲಾಯ್ತು 90 ಲಕ್ಷ ರೂ. ಮೌಲ್ಯದ ಅವ್ಯವಹಾರ!

ಬಾಂಬೆ ಹೈಕೋರ್ಟ್ | Photo Credit ; ecommitteesci.gov.in
ಮುಂಬೈ: 2018ರಿಂದ ಮುಳುಂದ್ ರಸ್ತೆ ಯೋಜನೆಯಲ್ಲಿ 90 ಲಕ್ಷ ರೂ. ಅವ್ಯವಹಾರ ನಡೆದಿರುವುದು 19 ವರ್ಷದ ಬಿಎಂಎಸ್ ವಿದ್ಯಾರ್ಥಿನಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಅರ್ಜಿಯಿಂದ ಬೆಳಕಿಗೆ ಬಂದಿದೆ.
ಸಾರ್ವಜನಿಕ ಆಡಳಿತದ ಹಿತದೃಷ್ಟಿಯಿಂದ ಘಟ್ಕೋಪರ್ ಮೂಲದ ವಿದ್ಯಾರ್ಥಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಈ ಸಂಗತಿ ಬಯಲಾಗಿದ್ದು, ಅಧಿಕ ಮೊತ್ತದ ಬಿಲ್, ಬೇಕಾಬಿಟ್ಟಿ ಟ್ರಕ್ ಬಳಕೆ ಹಾಗೂ 90 ಲಕ್ಷ ರೂ. ಅವ್ಯವಹಾರ ಸೇರಿದಂತೆ ಗಮನಾರ್ಹ ಪ್ರಮಾಣದ ಅವ್ಯವಹಾರಗಳು ಬಯಲಾಗಿವೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಾಂಬೆ ಹೈಕೋರ್ಟ್, ಈ ಆರೋಪಗಳ ಕುರಿತು ತನಿಖೆ ನಡೆಸಲು ಹೆಚ್ಚುವರಿ ಆಯುಕ್ತ ಹಾಗೂ ಮುಖ್ಯ ಇಂಜಿನಿಯರ್ರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಆದೇಶಿಸಿದೆ.
ತನ್ನ ಕಾಲೇಜಿನಲ್ಲಿನ ನಾಗರಿಕ ಹಕ್ಕುಗಳು ಮತ್ತು ಮಾಹಿತಿ ಹಕ್ಕು ಕಾಯ್ದೆ ಕುರಿತ ಅಭಿಯಾನದಿಂದ ಅರ್ಜಿ ಸಲ್ಲಿಸಿದ
ವಿದ್ಯಾರ್ಥಿನಿ ಪ್ರೇರಿತಳಾಗಿದ್ದಾಳೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ, ನಾಗರಿಕ ವಿಚಾರಗಳಲ್ಲಿ ಯುವ ಜನತೆ ಭಾಗಿಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿತು.
ವಿದ್ಯಾರ್ಥಿನಿಯು 2021ರಲ್ಲಿ ಮುಳುಂದ್ ರಸ್ತೆ ಯೋಜನೆ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಳು. ಈ ಕಾಯ್ದೆಯಡಿ ದೊರೆತಿರುವ ದಾಖಲೆಗಳಿಂದ ಮುಳುಂದ್ ರಸ್ತೆ ಯೋಜನೆಯಲ್ಲಿ ಗಂಭೀರ ಸ್ವರೂಪದ ಅವ್ಯವಹಾರಗಳು ನಡೆದಿರುವುದು ಬೆಳಕಿಗೆ ಬಂದಿತ್ತು.







