26/11ರ ಸಂಚುಕೋರ ರಾಣಾ ತಿಹಾರ ಜೈಲಿಗೆ ಸ್ಥಳಾಂತರ

ತಹವ್ವರ್ ರಾಣಾ | PC : ANI
ಹೊಸದಿಲ್ಲಿ: 26/11 ಮುಂಬೈ ಭಯೋತ್ಪಾದಕ ದಾಳಿಗಳ ಪ್ರಮುಖ ರೂವಾರಿ ಎನ್ನಲಾಗಿರುವ ತಹವ್ವರ್ ರಾಣಾನನ್ನು ಶುಕ್ರವಾರ ಸಂಜೆ ಭಾರೀ ಭದ್ರತೆಯ ನಡುವೆ ದಿಲ್ಲಿಯ ತಿಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ರಾಣಾನ ಎನ್ಐಎ ಕಸ್ಟಡಿ ಅಂತ್ಯಗೊಳ್ಳಲು ಒಂದು ದಿನ ಬಾಕಿಯಿದ್ದಾಗಲೇ ಆತನನ್ನು ದಿಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,ವಿಶೇಷ ನ್ಯಾಯಾಧೀಶ ಚಂದರ್ಜಿತ್ ಸಿಂಗ್ ಅವರು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದರು.
ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ರಾಣಾನನ್ನು ಭಾರೀ ಭದ್ರತೆಯೊಂದಿಗೆ ತಿಹಾರ್ ಜೈಲಿಗೆ ಸಾಗಿಸಲಾಗಿದ್ದು, ಆತನನ್ನು ಜೈಲಿನಲ್ಲಿಯ ಹೆಚ್ಚಿನ ಭದ್ರತಾ ವಲಯದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿದವು.
26/11ರ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯ ನಿಕಟವರ್ತಿ ರಾಣಾನನ್ನು ಗಡಿಪಾರು ವಿರುದ್ಧ ಆತ ಸಲ್ಲಿಸಿದ್ದ ಪುನರ್ಪರಿಶೀಲನಾ ಅರ್ಜಿಯನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದ ಬಳಿಕ ಭಾರತಕ್ಕೆ ಕರೆತರಲಾಗಿತ್ತು.