ಮಣಿಪುರ | ಮೂರು ಜಿಲ್ಲೆಗಳಲ್ಲಿ ಮತ್ತೆ 32 ಶಸ್ತ್ರಾಸ್ತ್ರಗಳ ಶರಣಾಗತಿ

Photo : PTI
ಇಂಫಾಲ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಲೂಟಿ ಮಾಡಲಾಗಿದ್ದ ಹಾಗೂ ಅಕ್ರಮವಾಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಶರಣಾಗಿಸಲು ನೀಡಲಾಗಿದ್ದ ಗಡುವು ಗುರುವಾರ ಮುಕ್ತಾಯಗೊಳ್ಳಲಿದ್ದು, ಈ ಗಡುವಿನ ಒಂದು ದಿನ ಮುಂಚಿತವಾಗಿಯೇ ಚೂರಚಂದ್ ಪುರ್, ಪೂರ್ವ ಇಂಫಾಲ ಹಾಗೂ ಕಾಂಗ್ಪೋಕ್ಪಿ ಜಿಲ್ಲೆಗಳಲ್ಲಿ ಇಟ್ಟು 32 ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಶಸ್ತ್ರಾಸ್ತ್ರಗಳನ್ನು ಲಾಮ್ಲೈ, ಪೊರೊಂಪಟ್ ಹಾಗೂ ಹೈಂಗ್ಯಾಂಗ್ ಪೊಲೀಸ್ ಠಾಣೆಗಳ ಕಮಾಂಡೊ ಘಟಕ ಹಾಗೂ ಪೂರ್ವ ಇಂಫಾಲ ಜಿಲ್ಲೆಯಲ್ಲಿನ 7ನೇ ಮಣಿಪುರ ರೈಫಲ್ಸ್ ಬೆಟಾಲಿಯನ್ ಘಟಕದಲ್ಲಿ ಬುಧವಾರ ಶರಣಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಚೂರಚಂದ್ ಪುರ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಕಾಂಗ್ಪೋಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಜನರು ಸ್ವಯಂಪ್ರೇರಿತರಾಗಿ ತಮ್ಮ ಆಯುಧಗಳನ್ನು ಹಸ್ತಾಂತರಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಶರಣಾಗಿಸಲು ಹೆಚ್ಚುವರಿ ಕಾಲಾವಕಾಶ ಒದಗಿಸಬೇಕು ಎಂದು ಬೆಟ್ಟ ಹಾಗೂ ಕಣಿವೆ ಪ್ರದೇಶದ ನಿವಾಸಿಗಳಿಬ್ಬರೂ ಮನವಿ ಮಾಡಿದ ಹಿನ್ನೆಲೆಯಲ್ಲಿ, ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಶಸ್ತ್ರಾಸ್ತ್ರಗಳನ್ನು ಶರಣಾಗಿಸಲು ನೀಡಲಾಗಿದ್ದ ಗಡುವನ್ನು ಮಾರ್ಚ್ 6ರ ಸಂಜೆ ಆರು ಗಂಟೆಯವರೆಗೆ ವಿಸ್ತರಿಸಿದ್ದರು.







