ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಕ್ಕೆ ತಾಯಿಯನ್ನೇ ಹೊಡೆದು ಕೊಂದ ಟಿಡಿಪಿ ಕಾರ್ಯಕರ್ತ!
![ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಕ್ಕೆ ತಾಯಿಯನ್ನೇ ಹೊಡೆದು ಕೊಂದ ಟಿಡಿಪಿ ಕಾರ್ಯಕರ್ತ! ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಕ್ಕೆ ತಾಯಿಯನ್ನೇ ಹೊಡೆದು ಕೊಂದ ಟಿಡಿಪಿ ಕಾರ್ಯಕರ್ತ!](https://www.varthabharati.in/h-upload/2024/05/16/1266960-11.webp)
ಸಾಂದರ್ಭಿಕ ಚಿತ್ರ
ಅನಂತಪುರ (ಆಂಧ್ರಪ್ರದೇಶ : ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP)ಕ್ಕೆ ಮತ ಹಾಕಿದ ಕಾರಣಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಕಾರ್ಯಕರ್ತನೋರ್ವ ತನ್ನ ತಾಯಿಯನ್ನೇ ಹತ್ಯೆಗೈದ ಆಘಾತಕಾರಿ ಘಟನೆ ಅನಂತಪುರ ಜಿಲ್ಲೆಯ ಕಂಬದೂರ್ ಮಂಡಲ್ನಲ್ಲಿ ನಡೆದಿದೆ.
ಕಂಬದೂರು ಮಂಡಲದ ಉಪರಪಳ್ಳಿಯ ಟಿಡಿಪಿ ಬೆಂಬಲಿಗನಾದ ವಡ್ಡೆ ವೆಂಕಟೇಶುಲು (35) ತನ್ನ ತಾಯಿ ಪಡ್ಡೆ ಸುಂಕಮ್ಮ (65) ವೈಎಸ್ಆರ್ಸಿಪಿಗೆ ಮತ ಹಾಕಿರುವುದು ತಿಳಿದು ಕ್ರೋಧಗೊಂಡಿದ್ದಾನೆ. ಕುಡಿದು ಮನೆಗೆ ಬಂದು ತಾಯಿಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ಆಕ್ರೋಶಗೊಂಡು ಕಬ್ಬಿಣದ ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಆಕೆ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅನಂತರ ವೆಂಕಟೇಶುಲು ಪರಾರಿಯಾಗಿದ್ದಾನೆ.
ಈ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಕುಂಬದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸಕ್ತ ತಲೆ ಮರೆಸಿಕೊಂಡಿರುವ ವೆಂಕಟೇಶುಲುವನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.