ಸುನೀತಾ ಕೇಜ್ರಿವಾಲ್ ರನ್ನು ಭೇಟಿಯಾದ ಆಪ್ ಶಾಸಕರು
ದಿಲ್ಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಕೇಜ್ರಿವಾಲ್ ಗೆ ಬೆಂಬಲ
![ಸುನೀತಾ ಕೇಜ್ರಿವಾಲ್ ರನ್ನು ಭೇಟಿಯಾದ ಆಪ್ ಶಾಸಕರು ಸುನೀತಾ ಕೇಜ್ರಿವಾಲ್ ರನ್ನು ಭೇಟಿಯಾದ ಆಪ್ ಶಾಸಕರು](https://www.varthabharati.in/h-upload/2024/04/02/1257908-3.webp)
Photo: PTI
ಹೊಸದಿಲ್ಲಿ : ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್)ದ ಶಾಸಕರು ಮಂಗಳವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರ ಪತ್ನಿ ಸುನೀತಾ ಕೇಜ್ರಿವಾಲ್ ರನ್ನು ಭೇಟಿಯಾಗಿ, ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಮತ್ತು ಅವರು ತಿಹಾರ್ ಜೈಲಿನಿಂದ ಸರಕಾರ ನಡೆಸಲು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
‘‘ದಿಲ್ಲಿಯ 2 ಕೋಟಿ ಜನರು ಅರವಿಂದ ಕೇಜ್ರಿವಾಲ್ ಜೊತೆಗೆ ನಿಂತಿದ್ದಾರೆ; ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಮತ್ತು ಜೈಲಿನಿಂದಲೇ ದಿಲ್ಲಿ ಸರಕಾರವನ್ನು ನಡೆಸಬೇಕು ಎಂಬುದಾಗಿ ದಿಲ್ಲಿ ಶಾಸಕರು ಸುನೀತಾ ಕೇಜ್ರಿವಾಲ್ ಗೆ ಹೇಳಿದರು’’ ಎಂದು ಆಪ್ ಪದಾಧಿಕಾರಿಯೊಬ್ಬರು ತಿಳಿಸಿದರು.
ಈ ಸಭೆಯಲ್ಲಿ 55 ಶಾಸಕರು ಭಾಗವಹಿಸಿದರು. ಮೂವರು ಶಾಸಕರು-ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯ ಮತ್ತು ಸತ್ಯೇಂದ್ರ ಜೈನ್- ಜೈಲಿನಲ್ಲಿದ್ದಾರೆ ಮತ್ತು ಇತರ ನಾಲ್ವರು ಶಾಸಕರು ದಿಲ್ಲಿಯ ಹೊರಗಿದ್ದಾರೆ ಎಂದು ಅವರು ಹೇಳಿದರು.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ ಆಪ್ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿಯ ಬಳಿ 8 ಶಾಸಕರಿದ್ದಾರೆ.
‘‘ಪ್ರಸಕ್ತ ರಾಜಕೀಯ ವಾತಾವರಣ, ಶಾಸಕರನ್ನು ಖರೀದಿಸಲು ಬಿಜೆಪಿಯು ನಡೆಸುತ್ತಿದೆ ಎನ್ನಲಾದ ಪ್ರಯತ್ನಗಳು ಮತ್ತು ಇನ್ನಷ್ಟು ಆಪ್ ನಾಯಕರನ್ನು ಬಂಧಿಸಲು ಬಿಜೆಪಿ ಮುಂದಾಗಿದೆ ಎಂಬ ಊಹಾಪೋಹಗಳ ಬಗ್ಗೆ ಚರ್ಚಿಸಲು ತಾವು ಸುನೀತಾ ಕೇಜ್ರಿವಾಲ್ ರನ್ನು ಭೇಟಿಯಾದೆವು’’ ಎಂದು ಆಪ್ ಶಾಸಕರೊಬ್ಬರು ತಿಳಿಸಿದರು.