ಚೂರಿ ಇರಿತ ಪ್ರಕರಣ | ನಟ ಸೈಫ್ ಅಲಿ ಖಾನ್ ಚೇತರಿಕೆ

ಸೈಫ್ ಅಲಿ ಖಾನ್ | PC : PTI
ಮುಂಬೈ : ಮುಂಬೈಯ ತನ್ನ ನಿವಾಸದಲ್ಲಿ ಅಪರಿಚಿತ ದುಷ್ಕರ್ಮಿಯಿಂದ ಚೂರಿ ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಲೀಲಾವತಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಅವರನ್ನು ತೀವ್ರ ನಿಗಾ ಘಟಕ (ಐಸಿಯು)ದಿಂದ ವಾರ್ಡ್ಗೆ ವರ್ಗಾಯಿಸಲಾಗಿದೆ. ಅವರು ಗುಣಮುಖರಾಗುತ್ತಿದ್ದಾರೆ. ಅವರನ್ನು ಎರಡರಿಂದ ಮೂರು ದಿಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
‘‘ನಾವು ಅವರ ಪ್ರಗತಿಯನ್ನು ಗಮನಿಸುತ್ತಿದ್ದೇವೆ. ನಮ್ಮ ನಿರೀಕ್ಷೆಗೆ ಅನುಗುಣವಾಗಿ ಅವರು ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಾವು ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಅವರು ಆರಾಮವಾಗಿದ್ದರೆ, ನಾವು ಅವರನ್ನು ಎರಡರಿಂದ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’’ ಎಂದು ಲೀಲಾವತಿ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ನಿತಿನ್ ಡಾಂಗೆ ಅವರು ಹೇಳಿದ್ದಾರೆ.
ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾದಲ್ಲಿರುವ ನಿವಾಸಕ್ಕೆ ಗುರುವಾರ ಮುಂಜಾನೆ ದುಷ್ಕರ್ಮಿಯೋರ್ವ ನುಗ್ಗಿ 1 ಕೋ.ರೂ. ಸುಲಿಗೆ ಹಣಕ್ಕೆ ಬೇಡಿಕೆ ಇರಿಸಿದ್ದ. ಖಾನ್ ಅವರು ಆತನನ್ನು ಎದುರಿಸಿದ್ದರು. ಈ ಸಂದರ್ಭ ಆತ ಖಾನ್ ಅವರಿಗೆ ಇರಿದಿದ್ದ.







