ಭಾರತದ ‘ಅತಿ ದೊಡ್ಡ ಹಗರಣ’ವನ್ನು ಮುಚ್ಚಿಹಾಕಲು ಸರಕಾರ ಎಷ್ಟೇ ಪ್ರಯತ್ನಿಸಿದರೂ ಸತ್ಯ ಹೊರಬರುತ್ತಿದೆ: 'ಅದಾನಿ' ಕುರಿತು ಕಾಂಗ್ರೆಸ್

PC : PTI
ಹೊಸದಿಲ್ಲಿ: ಅದಾನಿ ಗ್ರೂಪ್ ಶೇರುಗಳನ್ನು ಹೊಂದಿರುವ ಎರಡು ಸಾಗರೋತ್ತರ ಫಂಡ್ಗಳಿಗೆ ದಂಡಗಳನ್ನು ವಿಧಿಸುವ ಎಚ್ಚರಿಕೆಯನ್ನು ಸೆಬಿ ನೀಡಿದೆ ಎಂಬ ಮಾಧ್ಯಮ ವರದಿಗಳನ್ನು ಮಂಗಳವಾರ ಬೆಟ್ಟು ಮಾಡಿರುವ ಕಾಂಗ್ರೆಸ್, ಸೆಬಿ ಕ್ರಮಗಳು ಮೇಲ್ನೋಟಕ್ಕೆ ಪ್ರಗತಿಯನ್ನು ಸೂಚಿಸಬಹುದು. ಆದರೆ ಅದು ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ತನಿಖೆಯನ್ನು ವಿಳಂಬಿಸುತ್ತಲೇ ಇದೆ ಮತ್ತು ಈ ವಿಳಂಬದ ಲಾಭವನ್ನು ಅದಾನಿ ಗ್ರೂಪ್ ಪಡೆದುಕೊಳ್ಳುತ್ತಿದೆ ಎಂದು ಹೇಳಿದೆ.
ಕಾಂಗ್ರೆಸ್ನ ಆರೋಪಕ್ಕೆ ಸೆಬಿ ಅಥವಾ ಅದಾನಿ ಗ್ರೂಪ್ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.
‘ಡಬಲ್-ಇಂಜಿನ್’ ಮೋದಾನಿ(ಮೋದಿ + ಅದಾನಿ) ಸಾಹಸಗಾಥೆ ಮುಂದುವರಿದಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಕುಟುಕಿರುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಶೇರು ಹಿಡುವಳಿಗಳ ವಿವರಗಳನ್ನು ಒದಗಿಸುವಲ್ಲಿ ವೈಫಲ್ಯಕ್ಕಾಗಿ ಎಲಾರಾ ಕ್ಯಾಪಿಟಲ್ ನಿಯಂತ್ರಿತ ಎರಡು ಮಾರಿಷಸ್ ಮೂಲದ ಸಾಗರೋತ್ತರ ನಿಧಿಗಳಾದ ಎಲಾರಾ ಇಂಡಿಯಾ ಅಪಾರ್ಚುನಿಟೀಸ್ ಫಂಡ್ ಮತ್ತು ವೆಸ್ಪೆರಾ ಫಂಡ್ ಗೆ ದಂಡಗಳನ್ನು ವಿಧಿಸುವುದಾಗಿ ಮತ್ತು ಪರವಾನಿಗೆ ರದ್ದುಗೊಳಿಸುವುದಾಗಿ ಸೆಬಿ ಬೆದರಿಕೆಯೊಡ್ಡಿದೆ ಎಂದು ವರದಿಯಾಗಿದೆ ಎಂದು ಹೇಳಿದ್ದಾರೆ.
ಸೆಬಿ ನಿಯಮಗಳನ್ನು ಉಲ್ಲಂಘಿಸಿ ತನ್ನದೇ ಸ್ವಂತ ಕಂಪನಿಗಳಲ್ಲಿ ಬೇನಾಮಿ ಅದಾನಿ ಹೂಡಿಕೆಗಳಿಗೆ ವೇದಿಕೆಯಾಗುವ ಮೂಲಕ ಈ ಫಂಡ್ಗಳು ‘ಸ್ಟಾಕ್ ಪಾರ್ಕಿಂಗ್’ ಆರೋಪವನ್ನು ಎದುರಿಸುತ್ತಿವೆ.
ಈ ಎರಡೂ ಫಂಡ್ಗಳು ತಪ್ಪೊಪ್ಪಿಕೊಳ್ಳದೆ ಮತ್ತು ಸಾಂಕೇತಿಕ ಶುಲ್ಕವನ್ನು ಪಾವತಿಸುವ ಮೂಲಕ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿವೆ ಎಂದು ವರದಿಯಾಗಿದೆ. ಇದು ಮೋದಾನಿಗೆ ಅತ್ಯಂತ ಅನುಕೂಲಕರ ಕ್ರಮವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಡಿಸೆಂಬರ್,2022ರಲ್ಲಿ ಇಂಡಿಯಾ ಅಪಾರ್ಚುನಿಟೀಸ್ ಫಂಡ್ನ ಶೇ.98.78ರಷ್ಟನ್ನು ಮೂರು ಅದಾನಿ ಕಂಪನಿಗಳಲ್ಲಿ ಮತ್ತು ಜೂನ್,2022ರಲ್ಲಿ ವೆಸ್ಪಾರಾದ ಶೇ.93.9ರಷ್ಟನ್ನು ಅದಾನಿ ಎಂಟರ್ಪ್ರೈಸಸ್ನಲ್ಲಿ ಹೂಡಿಕೆ ಮಾಡಲಾಗಿತ್ತು ಎಂದು ರಮೇಶ್ ತನ್ನ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಸೆಬಿ ಕ್ರಮಗಳು ಮೇಲ್ನೋಟಕ್ಕೆ ತನಿಖೆಯಲ್ಲಿ ಪ್ರಗತಿಯನ್ನು ಸೂಚಿಸುತ್ತಿರಬಹುದು,ಆದರೆ ವಾಸ್ತವದಲ್ಲಿ ತನಿಖೆಯನ್ನು ಎರಡು ತಿಂಗಳುಗಳಲ್ಲಿ ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತ್ತು. ಆದರೆ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ತನಿಖೆ ಎಳೆಯುತ್ತಲೇ ಬಂದಿದೆ. ಈ ವಿಳಂಬದಿಂದ ಲಾಭವನ್ನು ಪಡೆದುಕೊಂಡಿದ್ದು ಮೋದಾನಿ ಮಾತ್ರ ಎಂದು ಹೇಳಿರುವ ಅವರು, ಭಾರತದ ‘ಅತ್ಯಂತ ದೊಡ್ಡ ಹಗರಣ’ವನ್ನು ಮುಚ್ಚಿಹಾಕಲು ಸರಕಾರವು ಎಷ್ಟೇ ಪ್ರಯತ್ನಿಸಿದ್ದರೂ ಸತ್ಯವು ಹೊರಗೆ ಬರುತ್ತಿದೆ ಎಂದಿದ್ದಾರೆ.
ಭಾರತದಲ್ಲಿಯ ‘ರಾಜಿ’ ಮಾಡಿಕೊಂಡಿರುವ ಸಂಸ್ಥೆಗಳ ಮೂಲಕವಲ್ಲದಿದ್ದರೂ ಮೋದಾನಿ ಲಂಚ ನೀಡಲು,ಬೆದರಿಸಲು ಅಥವಾ ಶಾಮೀಲಾಗಿಸಿಕೊಳ್ಳಲು ಸಾಧ್ಯವಿಲ್ಲದ ವಿದೇಶಿ ನ್ಯಾಯವ್ಯಾಪ್ತಿಗಳ ಮೂಲಕ ಸತ್ಯಗಳು ಹೊರಬರಲಿವೆ ಎಂದು ರಮೇಶ್ ಹೇಳಿದ್ದಾರೆ.







