ಭಾರತಕ್ಕೆ ಧಕ್ಕೆ ತರುವಂತೆ ನಮ್ಮ ನೆಲ ಬಳಸಲು ಬಿಡುವುದಿಲ್ಲ: ಅಫ್ಘಾನಿಸ್ತಾನದಿಂದ ಭರವಸೆ

Photo Credit : PTI
ಹೊಸದಿಲ್ಲಿ: “ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಅಫ್ಘಾನಿಸ್ತಾನದ ಭೂಮಿಯನ್ನು ಯಾರೂ ಬಳಸಲು ಅವಕಾಶ ನೀಡುವುದಿಲ್ಲ” ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಭರವಸೆ ನೀಡಿದ್ದಾರೆ.
ಭಾರತ ಪ್ರವಾಸದಲ್ಲಿರುವ ಮುತ್ತಾಖಿ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು, “ಅಮೆರಿಕದ ಆಕ್ರಮಣದ ಸಮಯದಲ್ಲಿಯೂ ಭಾರತ ವಿರುದ್ಧ ನಾವು ವಿರೋಧಾತ್ಮಕ ನಿಲುವು ತಾಳಲಿಲ್ಲ. ಭಾರತದೊಂದಿಗಿನ ಬಾಂಧವ್ಯವನ್ನು ನಾವು ಸದಾ ಗೌರವಿಸುತ್ತೇವೆ. ಯಾವುದೇ ಸೇನೆಯು ನಮ್ಮ ನೆಲವನ್ನು ಬೇರೆ ದೇಶಗಳ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಅದೇ ವೇಳೆ, ಅಫ್ಘಾನಿಸ್ತಾನದಲ್ಲಿನ ಭಾರತದ ರಾಯಭಾರ ಕಚೇರಿ ಶೀಘ್ರದಲ್ಲೇ ಪುನರಾರಂಭವಾಗುವುದಾಗಿ ಜೈಶಂಕರ್ ಭರವಸೆ ನೀಡಿದರು. ಅಲ್ಲದೆ ಅಫ್ಘಾನಿಸ್ತಾನದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭಾರತ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದರು.
ಈ ಮಾತುಕತೆಯು ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.





