ಅಹಮದಾಬಾದ್ ವಿಮಾನ ಅಪಘಾತ | ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಮೃತರ ಕುಟುಂಬಗಳಿಗೆ ಸಂತಾಪ
► ದುರಂತದ ತನಿಖೆ, ಕಠಿಣ ಕ್ರಮಕ್ಕೆ ಆಗ್ರಹ

PHOTO | ANI
ಹೊಸದಿಲ್ಲಿ: ಗುರುವಾರ ನಡೆದ ಏರ್ ಇಂಡಿಯಾ ವಿಮಾನ ಅಫಘಾತದಲ್ಲಿ ಮಡಿದವರ ಕುಟುಂಬಗಳಿಗೆ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅಖಿಲ ಭಾರತೀಯ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮನಿ, ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನದ ಅಪಘಾತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
"ಘಟನೆಯ ಬಗ್ಗೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ದುಃಖದ ಗಳಿಗೆಯಲ್ಲಿ ದೇವರು ಸಹನೆ ಮತ್ತು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ" ಎಂದು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
"ಈ ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆ, ಸಂಪೂರ್ಣ ಆರೈಕೆಯೆಡೆಗೆ ಗಮನ ನೀಡಬೇಕು. ವಿಮಾನಗಳಲ್ಲಿ ಸುರಕ್ಷತೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಒಂದು ಸಣ್ಣ ನಿರ್ಲಕ್ಷವೂ ನೂರಾರೂ ಜನರ ಜೀವಹಾನಿಗೆ ಕಾರಣವಾಗಬಹುದು. ಈ ದುರ್ಘಟನೆಯ ಬಗ್ಗೆ ತನಿಖೆ ನಡೆಸಬೇಕು. ನಿರ್ಲಕ್ಷಕ್ಕೆ ಕಾರಣವಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು", ಎಂದು ಗುಜರಾತ್ ಸರಕಾರ ಹಾಗೂ ಏರ್ ಇಂಡಿಯಾ ಆಡಳಿತ ಮಂಡಳಿಯನ್ನು ಅವರು ಆಗ್ರಹಿಸಿದ್ದಾರೆ.





