ಅಹಮದಾಬಾದ್ ವಿಮಾನ ಅಪಘಾತ ಘೋರ ದುರಂತ: ಸಂತಾಪ ವ್ಯಕ್ತಪಡಿಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

PC : PTI
ಹೊಸದಿಲ್ಲಿ: ಗುರುವಾರ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ಘೋರ ದುರಂತವಾಗಿದ್ದು, ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೃದಯಪೂರ್ವಕ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಕ್ಯು.ಆರ್. ಇಲ್ಯಾಸ್, ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಅಪಘಾತ ಭಾರಿ ದುರಂತವಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಹೃದಯಪೂರ್ವಕ ಸಹಾನುಭೂತಿ ಹಾಗೂ ಸಂತಾಪ ವ್ಯಕ್ತಪಡಿಸುತ್ತೇವೆ. ನಾವು ಈ ದುರಂತದಲ್ಲಿ ಮೃತಪಟ್ಟವರ ಶೋಕವನ್ನು ಅರ್ಥ ಮಾಡಿಕೊಂಡಿದ್ದು, ಈ ದುಃಖದ ಗಳಿಗೆಯಲ್ಲಿ ಅವರೊಂದಿಗೆ ಸಂಪೂರ್ಣವಾಗಿ ನಿಲ್ಲಲಿದ್ದೇವೆ ಎಂದು ಹೇಳಿದ್ದಾರೆ.
ಗುಜರಾತ್ ಸರಕಾರ ಹಾಗೂ ಏರ್ ಇಂಡಿಯಾ ಆಡಳಿತ ಮಂಡಳಿಯು ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರಿಗೂ ಸಂಪೂರ್ಣ ಆರೈಕೆ ಮತ್ತು ನೆರವನ್ನು ಖಾತರಿಗೊಳಿಸಬೇಕು ಹಾಗೂ ಅವರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತದೆ ಎಂದೂ ಅವರು ಒತ್ತಾಯಿಸಿದ್ದಾರೆ.





