ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚಳ: ಗಲ್ಫ್ ಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ

Photo: PTI
ಹೊಸದಿಲ್ಲಿ: ಸೋಮವಾರ ತಡರಾತ್ರಿ ಇರಾನ್ನಿಂದ ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರಿಂದ ಯುಎಇ ಮತ್ತು ಖತರ್ ತಮ್ಮ ವಾಯುಪ್ರದೇಶವನ್ನು ಮುಚ್ಚಿದೆ. ವಾಣಿಜ್ಯ ವಾಯು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಏರ್ ಇಂಡಿಯವು ಗಲ್ಫ್ ಪ್ರಾಂತ್ಯಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
ಇದರಿಂದ ದುಬೈ, ದೋಹಾ ಮತ್ತು ಅಬುಧಾಬಿ ವಾಯು ಸಂಚಾರ ಮಾರ್ಗದಲ್ಲಿ ಸೇವೆಗೆ ತೊಡಕುಂಟಾಗಿದೆ.
ಭಾರತದ ಅನೇಕ ನಗರಗಳು ಸೇರಿದಂತೆ ಪ್ರಪಂಚದಾದ್ಯಂತ ಗಲ್ಫ್ ಪ್ರಾಂತ್ಯಕ್ಕೆ ಹೋಗುತ್ತಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು. ಹಲವು ವಿಮಾನಗಳು ಮೂಲ ಸ್ಥಳಕ್ಕೆ ಮರಳಿದವು. ಕೆಲ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಲಕ್ನೋದಿಂದ ದಮ್ಮಾಮ್ಗೆ, ಮುಂಬೈನಿಂದ ಕುವೈತ್ ಗೆ ಮತ್ತು ಅಮೃತಸರದಿಂದ ದುಬೈಗೆ ಹೋಗುವ ವಿಮಾನಗಳು ಅರೇಬಿಯನ್ ಸಮುದ್ರದ ಮೇಲೆ ಟೇಕ್ ಆಫ್ ಆದ ಸ್ಥಳಕ್ಕೆ ಹಿಂದಿರುಗಿದವು. ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನಗಳು ಟೇಕ್ ಆಫ್ ಆಗದೆ ನಿಂತಿವೆ.
ಈ ಕುರಿತು ಮಂಗಳವಾರ ಬೆಳಗಿನ ಜಾವ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, "ಮಧ್ಯಪ್ರಾಚ್ಯಕ್ಕೆ ಮತ್ತು ಉತ್ತರ ಅಮೆರಿಕಾ ಮತ್ತು ಯುರೋಪ್ನ ಪೂರ್ವ ಕರಾವಳಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿದೆ" ಎಂದು ಹೇಳಿದೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಅಮೆರಿಕಾದಿಂದ ಭಾರತಕ್ಕೆ ಬರುವ ನಮ್ಮ ವಿಮಾನಗಳು ಆಯಾ ಮೂಲಗಳಿಗೆ ಹಿಂತಿರುಗುತ್ತಿವೆ. ಇತರ ವಿಮಾನಗಳನ್ನು ಭಾರತಕ್ಕೆ ಹಿಂತಿರುಗಿಸಲಾಗುತ್ತಿದೆ. ಅಥವಾ ಮುಚ್ಚಿದ ವಾಯುಪ್ರದೇಶಗಳಿಂದ ಬೇರೆ ಮಾರ್ಗಗಳಲ್ಲಿ ಕಳುಹಿಸಲಾಗುತ್ತಿದೆ, ಎಂದು ಏರ್ ಇಂಡಿಯಾ ಹೇಳಿದೆ.
"ವಿಮಾನಯಾನ ಸಂಸ್ಥೆಯ ನಿಯಂತ್ರಣಕ್ಕೆ ಮೀರಿದ ಈ ಅಡಚಣೆಯಿಂದ ಪ್ರಯಾಣಿಕರಿಗಾಥ ಅನಾನುಕೂಲತೆಗೆ ಸಂಸ್ಥೆಯು ವಿಷಾದಿಸುತ್ತದೆ. ಯಾವುದೇ ಬದಲಾವಣೆಗಳ ಕುರಿತು ನಾವು ನಮ್ಮ ಪ್ರಯಾಣಿಕರಿಗೆ ತಿಳಿಸುತ್ತೇವೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
ನಾಗರಿಕರು, ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಖತರ್ ವಾಣಿಜ್ಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಭಾರತೀಯ ಕಾಲಮಾನ ರಾತ್ರಿ 9 ಗಂಟೆಯ ಸುಮಾರಿಗೆ ಮುಚ್ಚಿತು. ಪರಿಣಾಮವಾಗಿ, ಭಾರತೀಯ ನಗರಗಳಿಂದ ಬಂದ ಅನೇಕ ವಿಮಾನಗಳು ಸೇರಿದಂತೆ ದೋಹಾಗೆ ಹೋಗುವ ಹೆಚ್ಚಿನ ಸಂಖ್ಯೆಯ ವಿಮಾನಗಳ ಮೇಲೆ ಪರಿಣಾಮ ಬೀರಿತು. ಮಾರ್ಗಮಧ್ಯೆಯಲ್ಲಿ ಪ್ರಯಾಣಿಸುವ ವಿಮಾನಗಳನ್ನು ಅಬುಧಾಬಿ ಅಥವಾ ಬಹ್ರೇನ್ ನಂತಹ ಹತ್ತಿರದ ಸ್ಥಳಗಳಿಗೆ ತಿರುಗಿಸಲಾಯಿತು. ಕೆಲವು ವಿಮಾನಗಳು ಭಾರತದ ತಮ್ಮ ಮೂಲ ನಗರಗಳಿಗೆ ಮರಳಿದವು. ಇನ್ನೇನು ಹೊರಡಲಿದ್ದ ಅನೇಕ ವಿಮಾನಗಳ ಪ್ರಯಾಣಿಕರ ಬೋರ್ಡಿಂಗನ್ನು ಸ್ಥಗಿತಗೊಳಿಸಲಾಯಿತು.
ಭಾರತ ಮತ್ತು ದೋಹಾ ನಡುವಿನ ಸಂಚಾರವು ಕಡಿಮೆಯಾಗಿದೆ. ಭಾರತ ಮತ್ತು ಖತರ್ ಮಧ್ಯೆ ಸಂಚರಿಸುವ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ದಿಲ್ಲಿ ಮತ್ತು ಹೈದರಾಬಾದ್ನಿಂದ ದೋಹಾಗೆ ಹೋಗುವ ವಿಮಾನಗಳನ್ನು ಅದರ ಮಾರ್ಗಮಧ್ಯೆ ಬಹ್ರೇನ್ಗೆ ಮತ್ತು ಕೊಚ್ಚಿಯಿಂದ ಹೋಗುತ್ತಿದ್ದ ಒಂದು ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಯಿತು.
ಏರ್ ಇಂಡಿಯಾದ ಒಂದು ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಯಿತು. ಇನ್ನೊಂದನ್ನು ಭಾರತಕ್ಕೆ ಹಿಂತಿರುಗಿಸಲಾಯಿತು. ಮೂರನೆಯದನ್ನು ಸ್ಥಗಿತಗೊಳಿಸಲಾಯಿತು.







