ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ಆರೋಪ: ಏರ್ ಇಂಡಿಯಾ ಪೈಲಟ್ ಅಮಾನತು

Photo| indiatoday
ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಲಟ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದ ಬೆನ್ನಲ್ಲೆ ಈ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ವಿಮಾನಯಾನ ಸಂಸ್ಥೆ ಪೈಲೆಟ್ ಅನ್ನು ಅಮಾನತುಗೊಳಿಸಿದೆ ಎಂದು thehindu ವರದಿ ಮಾಡಿದೆ.
ಘಟನೆ ಕುರಿತು ತನಗಾದ ಕಹಿ ಅನುಭವವನ್ನು ಸಂತ್ರಸ್ತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ತನ್ನ ಮುಖದಲ್ಲಿ ರಕ್ತ ಬರುತ್ತಿರುವ ಪೋಟೊ ಮತ್ತು ಪೈಲಟ್ ಫೋಟೊವನ್ನು ಕೂಡ ಹಂಚಿಕೊಂಡಿದ್ದರು.
‘ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಇಂತಹ ನಡವಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಸಂಬಂಧಪಟ್ಟ ಉದ್ಯೋಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ಈ ಕುರಿತು ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದೂ ವಿಮಾನಯಾನ ಸಂಸ್ಥೆ ಹೇಳಿದೆ.
ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಲಟ್ ವೀರೇಂದ್ರ ಸೆಜ್ವಾಲ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಏಳು ವರ್ಷದ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ಪ್ರಯಾಣಿಕ ಅಂಕಿತ್ ದಿವಾನ್ ಆರೋಪಿಸಿದ್ದರು.







