ಭಾರತ-ಪಾಕ್ ಪಂದ್ಯ ವಿಷಯವೇ ಅಲ್ಲ, ಪ್ರತಿಪಕ್ಷಗಳು ಪ್ರಮುಖ ವಿಷಯಗಳನ್ನೆತ್ತಬೇಕು: ಅಜಿತ್ ಪವಾರ್

ಅಜಿತ ಪವಾರ್ | PC : PTI
ಪುಣೆ,ಆ.24: ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಅಥವಾ ಸಂಚಾರ ದಟ್ಟಣೆಯಂತಹ ವಿಷಯಗಳ ಕುರಿತು ಮಾತನಾಡುವ ಬದಲು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಂತಹ ನಗಣ್ಯ ವಿಷಯಗಳನ್ನು ಎತ್ತುತ್ತಿರುವುದಕ್ಕಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಅವರು ಪ್ರತಿಪಕ್ಷ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದೊಂದಿಗೆ ಆಡಲು ಭಾರತ ತಂಡಕ್ಕೆ ಅನುಮತಿ ನೀಡಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ಟೀಕೆಗೆ ಪವಾರ್ ಪ್ರತಿಕ್ರಿಯಿಸುತ್ತಿದ್ದರು.
‘ನಮ್ಮ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಕಾರಣವಾಗಿರುವ ಪಾಕಿಸ್ತಾನದಂತಹ ನಮ್ಮ ಶತ್ರುಗಳೊಂದಿಗೆ ಭಾರತವು ಯಾವುದೇ ಸಂಬಂಧವನ್ನು ಹೊಂದಿರಬಾರದು ಎಂದು ಒಂದು ವರ್ಗದ ಜನರು ಭಾವಿಸಿದ್ದಾರೆ. ಈ ಪಂದ್ಯಗಳನ್ನು ಉತ್ಸಾಹದಿಂದ ವೀಕ್ಷಿಸುವ ಇನ್ನೊಂದು ಗುಂಪೂ ಇದೆ’ ಎಂದು ಹೇಳಿದ ಪವಾರ್, ಪ್ರತಿಪಕ್ಷಗಳು ಪ್ರಮುಖ ವಿಷಯಗಳನ್ನು ಎತ್ತುವ ಅಗತ್ಯವಿದೆ. ಇಂದು ಭಾರೀ ಮಳೆ, ಬೆಳೆ ನಷ್ಟ ಮತ್ತು ಸಂಚಾರ ದಟ್ಟಣೆಯಂತಹ ಹಲವು ಪ್ರಮುಖ ಸಮಸ್ಯೆಗಳಿವೆ. ಆದರೆ ಪ್ರತಿಪಕ್ಷಗಳು ಭಾರತ-ಪಾಕ್ ಪಂದ್ಯದಂತಹ ನಗಣ್ಯ ವಿಷಯಗಳ ಬಗ್ಗೆ ಮಾತನಾಡುತ್ತಿವೆ ಎಂದರು.







