ಅಪಹರಣ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ನಿರಾಶಕ್ತಿ ತೋರುತ್ತಿದ್ದಾರೆ : ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ | PC : PTI
ಅಲಹಾಬಾದ್: ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮನ್ನು ವೈಭವೀಕರಿಸಿಕೊಳ್ಳುತ್ತಾರೆ. ಆದರೆ ಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ನಾಪತ್ತೆಯಾಗಿರುವ ವ್ಯಕ್ತಿಯೊಬ್ಬರ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಅನಿಲ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, ಪೊಲೀಸರು ಸಾಮಾನ್ಯವಾಗಿ ಅಪಹರಣ ಪ್ರಕರಣಗಳಲ್ಲಿ ಉದಾಸೀನತೆ ತೋರುತ್ತಾರೆ, ಯಾಕೆಂದರೆ ಇದಕ್ಕಾಗಿ ಅವರನ್ನು ವೈಯಕ್ತಿಕವಾಗಿ ಹೊಣೆ ಮಾಡಲಾಗುವುದಿಲ್ಲ ಎಂದು ಹೇಳಿದೆ.
ಅಪಹರಣಗೊಂಡ ತನ್ನ ಸಹೋದರನನ್ನು ವಾರಾಣಾಸಿ ಪೊಲೀಸರು ಪತ್ತೆಹಚ್ಚಿಲ್ಲ ಎಂದು ಆರೋಪಿಸಿ ನಿತೇಶ್ ಕುಮಾರ್ ಎಂಬವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಲವು ಸಂದರ್ಭಗಳಲ್ಲಿ ಅಪಹರಣ ಪ್ರಕರಣಗಳು ಕೊಲೆ ಪ್ರಕರಣಗಳಾಗಿ ಮಾರ್ಪಡುತ್ತವೆ. ಅಪಹರಣಕ್ಕೊಳಗಾದವರನ್ನು ಯಾಕೆ ಪತ್ತೆ ಹಚ್ಚಲಾಗಿಲ್ಲ ಎಂದು ವಿವರಣೆ ನೀಡುವಂತೆ ವಾರಾಣಾಸಿ ಪೊಲೀಸ್ ಕಮಿಷನರ್ಗೆ ನಿರ್ದೇಶನ ನೀಡಿದೆ.





