ಬಿಹಾರ ವಿಧಾನಸಭಾ ಚುನಾವಣೆ | ಮೊದಲ ಪಟ್ಟಿ ಬಿಡುಗಡೆ ಬಳಿಕ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು

File Photo: PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಂಗಳವಾರ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆ ಬಳಿಕ ಮೈತ್ರಿಕೂಟದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಎನ್ಡಿಎ ಮೈತ್ರಿಕೂಟ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿತ್ತು. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಬಿಜೆಪಿ ಮತ್ತು JD(U) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ 29 ಸ್ಥಾನಗಳನ್ನು ನೀಡಲಾಗಿದೆ. ಅದೇ ರೀತಿ ರಾಷ್ಟ್ರೀಯ ಲೋಕ ಮೋರ್ಚಾ (ಆರ್ಎಲ್ಎಂ) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ) ಗೆ ತಲಾ ಆರು ಸ್ಥಾನಗಳನ್ನು ನೀಡಲಾಗಿದೆ.
ಎನ್ಡಿಎ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬಳಿಕ ಸೀಟು ಹಂಚಿಕೆ ಪ್ರಕ್ರಿಯೆ ಮೈತ್ರಿಕೂಟದಲ್ಲಿ ಬಿರುಕಿಗೆ ಕಾರಣವಾಗಿದೆ. ಜೆಡಿಯು ಪ್ರಾಬಲ್ಯದ ಕ್ಷೇತ್ರವನ್ನು ಪಾಸ್ವಾನ್ ಅವರ ಪಕ್ಷಕ್ಕೆ ಹಂಚಿಕೆ ಮಾಡುವುದಕ್ಕೆ ಆಕ್ಷೇಪಿಸಿದೆ. ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ ಸೋನ್ಬಾರ್ಸಾ, ರಾಜ್ಗೀರ್, ಎಕ್ಮಾ ಮತ್ತು ಮೋರ್ವಾ ಕ್ಷೇತ್ರದಲ್ಲಿ ಲೋಕ ಜನಶಕ್ತಿ ಪಕ್ಷದ ಜೊತೆ ಕೈಜೋಡಿಸಲು ಜೆಡಿಯು ನಿರಾಕರಿಸಿದೆ.
ನಿತೀಶ್ ಕುಮಾರ್ ಅವರ JD(U) ಪಕ್ಷವು ಕೇವಲ ಎರಡು ಸ್ಥಾನಗಳನ್ನು ಅಂದರೆ ತಾರಾಪುರ ಮತ್ತು ತೇಘ್ರಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಇದಕ್ಕೆ ಬದಲಾಗಿ ಬಿಜೆಪಿಯ ಕಹಲ್ಗಾಂ ಸ್ಥಾನವನ್ನು ಪಡೆದಿದೆ.
ಈ ಮಧ್ಯೆ ಚಿರಾಗ್ ಪಾಸ್ವಾನ್ ಅವರು ಕೂಡ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ದಾನಾಪುರ, ಲಾಲ್ಗಂಜ್, ಹಿಸುವಾ ಮತ್ತು ಅರ್ವಲ್ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಪಾಸ್ವಾನ್ ಅವರಿಗೆ ನೀಡಲು ನಿರಾಕರಿಸಿದೆ. ಆ ಸ್ಥಳಗಳಲ್ಲಿ ತನ್ನದೇ ಅಭ್ಯರ್ಥಿಗಳನ್ನು ಘೋಷಿಸಿದೆ.
ರಾಷ್ಟ್ರೀಯ ಲೋಕ ಮೋರ್ಚಾ (ಆರ್ಎಲ್ಎಂ) ಪಾಳಯದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಉಪೇಂದ್ರ ಕುಶ್ವಾಹ ಅವರು ಮಹುವಾ ಕ್ಷೇತ್ರವನ್ನು ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿಗೆ ಹಂಚಿಕೆ ಮಾಡಿದ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಕುಶ್ವಾಹ ಅವರನ್ನು ಸಮಾಧಾನಪಡಿಸಲು ಬಿಜೆಪಿ ಪ್ರಯತ್ನಿಸಿದೆ. ಆದರೆ ಅವರು ಎನ್ಡಿಎಯಲ್ಲಿ ಏನೂ ಸರಿಯಿಲ್ಲ. ನಾನು ದಿಲ್ಲಿಗೆ ಹೋಗುತ್ತಿದ್ದೇನೆ. ನಿರ್ಧಾರಗಳ ಬಗ್ಗೆ ಸ್ವಲ್ಪ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಆವಾಮ್ ಮೋರ್ಚಾ( HAM) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಸೀಟು ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







