‘ತಂಬಾಕು ಬಳಕೆಗೆ ಉತ್ತೇಜನ’ ಆರೋಪ: ಅರುಂಧತಿ ರಾಯ್ ಹೊಸ ಪುಸ್ತಕದ ಮುಖಪುಟದ ವಿರುದ್ಧ ಪಿಐಎಲ್

ಆರುಂಧತಿ ರಾಯ್ | PC : newindianexpress.com
ಕೊಚ್ಚಿ: ಜನಪ್ರಿಯ ಲೇಖಕಿ ಅರುಂಧತಿ ರಾಯ್ ಅವರ ಪುಸ್ತಕ ‘ಮದರ್ ಮೇರಿ ಕಮ್ಸ್ ಟು ಮಿ’ಯ ಮುಖಪುಟ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಗೆ ಪ್ರತಿಕ್ರಿಯಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಗುರುವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ಶಾಸನಾತ್ಮಕ ಆರೋಗ್ಯ ಎಚ್ಚರಿಕೆ ಇಲ್ಲದೆ ಲೇಖಕರು ಸಿಗರೇಟು ಸೇದುತ್ತಿರುವ ಚಿತ್ರವನ್ನು ಒಳಗೊಂಡ ಮುಖಪುಟ ಕಾನೂನಿನ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಉಚ್ಚ ನ್ಯಾಯಾಲಯದ ವಕೀಲ, ದೂರುದಾರ ರಾಜಸಿಂಹ ಪ್ರತಿಪಾದಿಸಿದ್ದಾರೆ.
ಪ್ರಸಕ್ತ ಮುಖಪುಟದೊಂದಿಗೆ ಪುಸ್ತಕದ ಮಾರಾಟ, ಪ್ರಸಾರ ಹಾಗೂ ಪ್ರದರ್ಶನವನ್ನು ನಿಷೇಧಿಸುವಂತೆ ಕೂಡ ಅರ್ಜಿ ಕೋರಿದೆ.
‘‘ಧೂಮಪಾನ ಆರೋಗ್ಯಕ್ಕೆ ಹಾನಿಕರ’’ ಅಥವಾ ‘‘ತಂಬಾಕು ಕ್ಯಾನ್ಸರ್ಗೆ ಕಾರಣವಾಗುತ್ತದೆ’’ ಇಂತಹ ಶಾಸನಾತ್ಮಕ ಎಚ್ಚರಿಕೆಗಳು ಕಾಯ್ದೆಯ ಅಡಿಯಲ್ಲಿ ಕಡ್ಡಾಯವಾಗಿವೆ.
ಪುಸ್ತಕದ ಅಂಗಡಿ, ಗ್ರಂಥಾಲಯ, ಡಿಜಿಟಲ್ ಪ್ಲಾಟ್ಫಾರಂ ಹಾಗೂ ಪ್ರಚಾರ ವಸ್ತುಗಳ ಮೂಲಕ ವ್ಯಾಪಕವಾಗಿ ಲಭ್ಯವಿರುವ ಪುಸ್ತಕದ ಲೇಖಕಿ ಸಿಗರೇಟು ಸೇದುತ್ತಿರುವ ಮುಖಪುಟದ ಮೂಲಕ ಧೂಮಪಾನ ಫ್ಯಾಶನ್, ಬೌದ್ಧಿಕ ಉತ್ತೇಜಕ ಹಾಗೂ ಆಂತರಿಕವಾಗಿ ಸೃಜನಶೀಲತೆಗೆ ಸಂಬಂಧಿಸಿದೆ ಎಂದು ಯುವಕರನ್ನು ಸಂಪೂರ್ಣವಾಗಿ ದಾರಿತಪ್ಪಿಸುತ್ತದೆ ಹಾಗೂ ಅನಾರೋಗ್ಯಕರ ಸಂದೇಶ ರವಾನಿಸುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.







