ಅಸ್ಸಾಂ: ಭೂಮಿಯ ಕುರಿತು ಅರಣ್ಯ ಅಧಿಕಾರಿಗಳೊಂದಿಗೆ ಘರ್ಷಣೆ: ಮಹಿಳೆ ಮೃತ್ಯು, ಆರು ಮಂದಿಗೆ ಗಾಯ
![ಅಸ್ಸಾಂ: ಭೂಮಿಯ ಕುರಿತು ಅರಣ್ಯ ಅಧಿಕಾರಿಗಳೊಂದಿಗೆ ಘರ್ಷಣೆ: ಮಹಿಳೆ ಮೃತ್ಯು, ಆರು ಮಂದಿಗೆ ಗಾಯ ಅಸ್ಸಾಂ: ಭೂಮಿಯ ಕುರಿತು ಅರಣ್ಯ ಅಧಿಕಾರಿಗಳೊಂದಿಗೆ ಘರ್ಷಣೆ: ಮಹಿಳೆ ಮೃತ್ಯು, ಆರು ಮಂದಿಗೆ ಗಾಯ](https://www.varthabharati.in/h-upload/2023/07/18/1169201-assam-forest-officers-twitter64b66f7b04509-1.webp)
Photo: Twitter
ಗುವಾಹಟಿ: ಸೋಮವಾರ ಅಸ್ಸಾಂನ ಬುರ್ಹಾ ಚಪೋರಿ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರದೇಶದಿಂದ ಹೊರಹಾಕಲ್ಪಟ್ಟ ಜನರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಡುವಿನ ಘರ್ಷಣೆಯ ನಂತರ ಓರ್ವ ಮಹಿಳೆ ಮೃತಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮಹಿಳೆಯನ್ನು ರಹೀಮಾ ಖಾತುನ್ ಎಂದು ಗುರುತಿಸಲಾಗಿದ್ದು, ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಮೂವರು ನಾಗರಿಕರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಮೂವರು ಅರಣ್ಯ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
ಫೆಬ್ರವರಿಯಲ್ಲಿ, ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 2,500 ಕ್ಕೂ ಹೆಚ್ಚು ಕುಟುಂಬಗಳನ್ನು ಹೊರಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿತು.
ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯಲ್ಲಿರುವ ಬುರ್ಹಾ ಚಪೋರಿ ವನ್ಯಜೀವಿ ಅಭಯಾರಣ್ಯದಲ್ಲಿ ಸುಮಾರು 1,892 ಹೆಕ್ಟೇರ್ ಭೂಮಿಯಲ್ಲಿ ಹೊರಹಾಕುವ ಕಾರ್ಯಾಚರಣೆಯನ್ನು ನಡೆಸಲಾಯಿತು. ವನ್ಯಜೀವಿ ಅಭಯಾರಣ್ಯವನ್ನು 1974 ರಲ್ಲಿ ಮೀಸಲು ಅರಣ್ಯ ಎಂದು ಘೋಷಿಸಲಾಯಿತು.
ಮೇ ತಿಂಗಳಲ್ಲಿ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸಲಾಯಿತು. ನಾಗಾಂವ್ ವನ್ಯಜೀವಿ ವಿಭಾಗೀಯ ಅರಣ್ಯಾಧಿಕಾರಿ ಜಯಂತ ದೇಕಾ ಅವರು, ಹೊರಹಾಕಲ್ಪಟ್ಟ ಕೆಲವು ಕುಟುಂಬಗಳು ಪ್ರದೇಶದ ಹೊರಗಿನ ತಾತ್ಕಾಲಿಕ ಮನೆಗಳು ಜಲಾವೃತಗೊಂಡ ನಂತರ ಕಾಡಿಗೆ ಹಿಂತಿರುಗಿವೆ ಎಂದು ಹೇಳಿಕೆ ನೀಡಿದ್ದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
"ರಹೀಮಾ ಖಾತುನ್ ಅವರ ಕುಟುಂಬವು ಹಿಂದಿನ ದಿನ ಬಂದು ಟಾರ್ಪಾಲಿನ್ ಟೆಂಟ್ ಹಾಕಿತ್ತು. ಅಲ್ಲಿ ಜಮೀನು ಎತ್ತರದಲ್ಲಿದೆ ಮತ್ತು ಅವರಿಗೆ ತಮ್ಮ ಆಡು ಮತ್ತು ಹಸುಗಳನ್ನು ಸಾಕಲು ಸ್ಥಳದ ಅಗತ್ಯವಿತ್ತು," ಎಂದು ಆಲ್ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟದ ನಾಗಾಂವ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ನೂರ್ ಹೇಳಿದರು.