ಅಯೋಧ್ಯೆ ರಾಮಮಂದಿರಕ್ಕೆ ಮೊದಲ ಇಟ್ಟಿಗೆ ಇರಿಸಿದ ವಿಎಚ್ಪಿ ನಾಯಕ ಕಾಮೇಶ್ವರ್ ಚೌಪಾಲ್ ನಿಧನ

ಕಾಮೇಶ್ವರ್ ಚೌಪಲ್ | PC : thehindu.com
ಲಕ್ನೋ: 1989ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಮೊದಲ ಇಟ್ಟಿಗೆಯನ್ನು ಇರಿಸಿದ ಬಿಜೆಪಿ ನಾಯಕ ಹಾಗೂ ವಿಶ್ವಹಿಂದೂ ಪರಿಷತ್ನ ಪದಾಧಿಕಾರಿ ಕಾಮೇಶ್ವರ್ ಚೌಪಲ್ ಅವರು ಶುಕ್ರವಾರ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಮಾಧ್ಯಮ ಕೇಂದ್ರ ತಿಳಿಸಿದೆ.
ಅಯೋಧ್ಯೆ ಶ್ರೀರಾಮದೇಗುಲ ಟ್ರಸ್ಟ್ನ ಸದಸ್ಯರಾದ ಚೌಪಾಲ್ ಅವರು ದೀರ್ಘಸಮಯದಿಂದ ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದರು.
ಕಾಮೇಶ್ವರ್ ಚೌಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರೊಬ್ಬ ‘ಶ್ರೀರಾಮಚಂದ್ರನ ವಿನಮ್ರ ಭಕ್ತ’ರೆಂದು ಬಣ್ಣಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮಮಂದಿರ ದೇವಾಲಯದ ನಿರ್ಮಾಣಕ್ಕಾಗಿ ಚೌಪಾಲ್ ಅವರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದರೆಂದು ಮೋದಿ ತಿಳಿಸಿದರು.
ದಲಿತ ಸಮುದಾಯದವರಾದ ಚೌಪಾಲ್ ಅವರ ಸಮಾಜದ ಅವಕಾಶವಂಚಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದರೆಂದು ಪ್ರಧಾನಿ ಸ್ಮರಿಸಿದ್ದಾರೆ.





