ಉತ್ತರ ಪ್ರದೇಶ | ಪ್ರತಿಭಟನೆ ಮಧ್ಯೆ 54 ವರ್ಷದ ಬಳಿಕ ತೆರೆದ ಬಂಕೆ ಬಿಹಾರಿ ದೇವಾಲಯದ ಖಜಾನೆ

Photo credit: bihariji.org
ಲಕ್ನೋ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯದ ಖಜಾನೆಯನ್ನು 54 ವರ್ಷದ ಬಳಿಕ ಶನಿವಾರ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗಿದೆ.
ಕೆಲ 'ಸೇವಾಯತ್'ಗಳ (ದೇವಾಲಯದ ದೈನಂದಿನ ಆಚರಣೆಗಳಿಗೆ ಜವಾಬ್ದಾರರಾಗಿರುವ ಗೋಸ್ವಾಮಿ ಪುರೋಹಿತರು) ಪ್ರತಿಭಟನೆಯ ನಡುವೆಯೂ ದೇವಾಲಯದ ಖಜಾನೆಯನ್ನು ತೆರೆಯಲಾಯಿತು.
ದೇವಾಲಯದ ನಿರ್ವಹಣಾ ಸಮಿತಿಯ ಆದೇಶದ ಮೇರೆಗೆ ಖಜಾನೆಯನ್ನು ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿದೆ.
ಖಜಾನೆಯಲ್ಲಿ ಒಂದು ಮರದ ಪೆಟ್ಟಿಗೆ, ಮೂರು ಪಾತ್ರೆ, ಮೂರು ಬಟ್ಟಲು, ಒಂದು ‘ಪರಾತ್’ (ಅಗಲವಾದ ತಟ್ಟೆ), ಒಂದು ಸಣ್ಣ ಬೆಳ್ಳಿ ಛತ್ರಿ ಮತ್ತು 1970ರ ಫೆಬ್ರುವರಿ 2 ದಿನಾಂಕದ ಪತ್ರವೊಂದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.
'ಸೇವಾಯತ್'ಗಳ ಒಂದು ವಿಭಾಗ ಖಜಾನೆ ತೆರೆಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ವಸ್ತುಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಪರದೆಯ ಮೂಲಕ ನೇರಪ್ರಸಾರ ಮಾಡಬೇಕೆಂದು ಒತ್ತಾಯಿಸಿತ್ತು ಎಂದು ವರದಿಗಳು ತಿಳಿಸಿವೆ.
ಇತಿಹಾಸಕಾರರ ಪ್ರಕಾರ, ದೇವಾಲಯದ ಖಜಾನೆಯನ್ನು 1971ರಲ್ಲಿ ತೆರೆಯಲಾಯಿತು. ನಂತರ ಅದನ್ನು ತೆರೆಯಲು ಪ್ರಯತ್ನಿಸಿದರೂ ವಿವಿಧ ಕಾರಣಗಳಿಂದ ತೆರೆಯಲು ಸಾಧ್ಯವಾಗಿರಲಿಲ್ಲ. 1926 ಮತ್ತು 1936ರಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಾಗಿಲನ್ನು ಮುಚ್ಚಲಾಗಿದೆ.







