ಬಿಹಾರ: ಅವಳಿ ಹತ್ಯೆ ಪ್ರಕರಣ, ಮಾಜಿ ಸಂಸದ ಪ್ರಭುನಾಥ್ ಸಿಂಗ್ಗೆ ಅಜೀವ ಕಾರಾಗೃಹ ಶಿಕ್ಷೆ

MP Prabhunath Singh | Photo: ANI
ಹೊಸದಿಲ್ಲಿ : 1995ರ ಅವಳಿ ಕೊಲೆ ಪ್ರಕರಣದಲ್ಲಿ ಬಿಹಾರದ ಮಾಜಿ ಸಂಸದ ಪ್ರಭುನಾಥ್ ಸಿಂಗ್ಗೆ ಅಜೀವ ಕಾರಾಗೃಹ ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಅವಳಿ ಕೊಲೆ ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್ ರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹಾಗೂ ಪಾಟ್ನಾ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಸುಪ್ರೀಂ ಕೋರ್ಟ್ ನ ಮೂವರು ಸದಸ್ಯರ ಪೀಠ ಸಿಂಗ್ ಅವರನ್ನು ದೋಷಿ ಎಂದು ಆಗಸ್ಟ್ 18ರಂದು ಪ್ರಕಟಿಸಿತ್ತು.
ಶಿಕ್ಷೆಯ ಪ್ರಮಾಣದ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಹಾಗೂ ವಿಕ್ರಮ್ ನಾಥ್ ಅವರನ್ನು ಒಳಗೊಡ ಪೀಠ ಸಿಂಗ್ಗೆ ಅಜೀವ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಹಲವು ಅವಧಿ ಬಿಹಾರದ ಮಹಾರಾಜ್ಗಂಜ್ ನ ಸಂಸದರಾಗಿದ್ದ ಸಿಂಗ್ ಅವರನ್ನು ದೋಷಿ ಎಂದು ಪರಿಗಣಿಸುವ ಸಂದರ್ಭ ಸುಪ್ರೀಂ ಕೋರ್ಟ್, ಸಿಂಗ್ ತನ್ನ ವಿರುದ್ಧದ ಎಲ್ಲಾ ಸಾಕ್ಷಗಳನ್ನು ಅಳಿಸಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ಗಮನಿಸಿತು.
ಬಿಹಾರದ ಸರನ್ ಜಿಲ್ಲೆಯ ಛಾಪ್ರಾದಲ್ಲಿ 1995 ಮಾರ್ಚ್ ನಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ದಿನ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ ಇದಾಗಿದೆ.





