ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಹಲ್ಲೆ; ಬಿಜೆಪಿ ಶಾಸಕ ರಾಜೀವ್ ಸಿಂಗ್ ಗೆ ನೋಟಿಸ್

ಶಾಸಕ ರಾಜೀವ್ ಸಿಂಗ್
ಝಾನ್ಸಿ: ಹೊಸದಿಲ್ಲಿಯಿಂದ ಭೋಪಾಲಕ್ಕೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೋರ್ವರಿಗೆ ಬಬಿನಾ ಶಾಸಕ ರಾಜೀವ್ ಸಿಂಗ್ ಅವರ ಬೆಂಬಲಿಗರೆಂದು ಹೇಳಲಾದ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕುರಿತಂತೆ ರಾಜೀವ್ ಸಿಂಗ್ ಅವರಿಗೆ ಬಿಜೆಪಿಯ ಉತ್ತರಪ್ರದೇಶ ಘಟಕ ಶೋಕಾಸ್ ನೋಟಿಸು ನೀಡಿದೆ.
ಈ ಘಟನೆ ಝಾನ್ಸಿ ರೈಲು ನಿಲ್ದಾಣದಲ್ಲಿ ಜೂನ್ 19ರಂದು ಸಂಭವಿಸಿತ್ತು. ಹಲ್ಲೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮ, ಮೈಕ್ರೊ ಬ್ಲಾಗಿಂಗ್ ಸೈಟ್ ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು.
ಈ ವೈರಲ್ ವೀಡಿಯೊದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನಂತರ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶುಕ್ಲಾ ಅವರು ರಾಜೀವ್ ಸಿಂಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಕೃತ್ಯ ಗಂಭೀರ ಅಶಿಸ್ತಿನ ಅಡಿಯಲ್ಲಿ ಬರುತ್ತದೆ ಎಂದು ಪತ್ರ ಹೇಳಿದೆ ಹಾಗೂ 7 ದಿನಗಳ ಒಳಗೆ ಲಿಖಿತ ವಿವರಣೆ ನೀಡುವಂತೆ ಆಗ್ರಹಿಸಿದೆ.
18 ನಿಮಿಷಗಳ ವೀಡಿಯೊ ತುಣುಕಿನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಇ-2 ಬೋಗಿಯಲ್ಲಿ ರಾಜ್ಕಿಶೋರ್ ಎಂಬ ಪ್ರಯಾಣಿಕನಿಗೆ ಗುಂಪೊಂದು ಥಳಿಸುತ್ತಿರುವುದು ಕಂಡು ಬಂದಿದೆ.