ಬಿಜೆಪಿ-ಜೆಡಿಯು ಬಿಹಾರ ಯುವಜನತೆಯ ಎಲ್ಲಾ ಅವಕಾಶ, ಕನಸುಗಳನ್ನು ಕಸಿದುಕೊಂಡಿದೆ : ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ನ. 2: ಬಿಜೆಪಿ-ಜೆಡಿಯು ಪಕ್ಷಗಳು ಕಳೆದ ಎರಡು ದಶಕಗಳಿಂದ ಬಿಹಾರದ ಯುವ ಜನತೆಯ ಎಲ್ಲಾ ಅವಕಾಶಗಳು ಹಾಗೂ ಕನಸುಗಳನ್ನು ಕಸಿದುಕೊಂಡಿದೆ. ರಾಜ್ಯದ ಸ್ವಾಭಿಮಾನವನ್ನು ಮರು ಸ್ಥಾಪಿಸಲು ಇದು ಸರಿಯಾದ ಸಮಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ಹೇಳಿದ್ದಾರೆ.
ಮಹಾಘಟಬಂಧನದ ‘ನ್ಯಾಯ ಸಂಕಲ್ಪ’ವನ್ನು ನವೀಕರಿಸುವ ಸಮಯ ಬಂದಿದೆ ಎಂದು ಖರ್ಗೆ ಹೇಳಿದರು. ಉದ್ಯೋಗ ಮತ್ತು ಅಭಿವೃದ್ಧಿಯಲ್ಲಿ ಆಡಳಿತಾರೂಢ ಪಕ್ಷದ ಕಳಪೆ ದಾಖಲೆಯನ್ನು ಅವರು ಟೀಕಿಸಿದರು.
‘ಎಕ್ಸ್’ನ ಪೋಸ್ಟ್ನಲ್ಲಿ ಖರ್ಗೆ, ‘‘ಬಿಹಾರದ ಜನರು ಯಾವ ಸ್ಥಳಕ್ಕೆ ಹೋದರೂ ಕಠಿಣ ಪರಿಶ್ರಮ ಹಾಗೂ ಪ್ರತಿಭೆಯಿಂದ ಅಲ್ಲಿನ ಭವಿಷ್ಯವನ್ನು ಬದಲಾಯಿಸುತ್ತಾರೆ. ಆದರೆ, ತಮ್ಮದೆ ಬಿಹಾರದ ಹಣೆಬರಹವನ್ನು ಬದಲಾಯಿಸಲು ಇದುವರೆ ಸಾಧ್ಯವಾಗಿಲ್ಲ. ಯಾಕೆ ಗೊತ್ತೆ ? ಬಿಜೆಪಿ-ಜೆಡಿಯು ಕಳೆದ 20 ವರ್ಷಗಳಿಂದ ಬಿಹಾರದ ಯುವಜನತೆಯ ಪ್ರತಿಯೊಂದು ಅವಕಾಶ ಹಾಗೂ ಕನಸುಗಳನ್ನು ಕಸಿದುಕೊಂಡಿದೆ. ಅವರನ್ನು ಬಲವಂತವಾಗಿ ಕಾರ್ಮಿಕರನ್ನಾಗಿ ಮಾಡಿದೆ’’ ಎಂದರು.
ಕೈಗಾರಿಕೆ ವಲಯದಲ್ಲಿನ ಉದ್ಯೋಗದಲ್ಲಿ ಬಿಹಾರ ರಾಷ್ಟ್ರಪಟ್ಟದಲ್ಲಿ 23ನೇ ಸ್ಥಾನದಲ್ಲಿದೆ. ರಾಜ್ಯಾದ್ಯಂತ ಈ ವಲಯದಲ್ಲಿ ಕೇವಲ 1.3 ಲಕ್ಷ ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 36,135 ಜನರು ಮಾತ್ರ ಖಾಯಂ ಉದ್ಯೋಗಿಗಳು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪ್ರಣಾಳಿಕೆಯನ್ನು ಖರ್ಗೆ ಹಂಚಿಕೊಂಡಿದ್ದಾರೆ.





