2018ರ ಪಾಟೀದಾರ್ ಪ್ರತಿಭಟನೆ ಪ್ರಕರಣ |ಬಿಜೆಪಿ ನಾಯಕ ಹಾರ್ದಿಕ್ ಪಟೇಲ್ ಗೆ ಬಂಧನ ವಾರಂಟ್

ಹಾರ್ದಿಕ್ ಪಟೇಲ್ | PC : PTI
ಅಹ್ಮದಾಬಾದ್, ಸೆ. 10: ಗುಜರಾತ್ ನ ಪಾಟೀದಾರ್ ಮೀಸಲಾತಿ ಚಳುವಳಿಯ ಭೂತ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಮತ್ತೆ ಕಾಡುತ್ತಿದೆ. 2018ರ ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಪಟೇಲ್ ಹಾಗೂ ಇತರ ಇಬ್ಬರಿಗೆ ಅಹ್ಮದಾಬಾದ್ ನ ಗ್ರಾಮೀಣ ನ್ಯಾಯಾಲಯ ಬುಧವಾರ ಬಂಧನ ವಾರಂಟ್ ಹೊರಡಿಸಿದೆ.
ಪದೇ ಪದೇ ನ್ಯಾಯಾಲಯಕ್ಕೆ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣ 2018 ಆಗಸ್ಟ್ ನಲ್ಲಿ ಆರಂಭವಾಗಿದ್ದು, ಆಗ ಪಾಟೀದಾರ್ ಮೀಸಲಾತಿ ಚಳುವಳಿಯ ನಾಯಕನಾಗಿದ್ದ ಹಾರ್ದಿಕ್ ಪಟೇಲ್ ತನ್ನ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ್ದರು. ಅಹ್ಮದಾಬಾದ್ ನಿಕೋಲ್ ಪ್ರದೇಶದಲ್ಲಿ ಶಾಂತಿಯುತವಾಗಿ ಆರಂಭವಾಗಿದ್ದ ಪ್ರತಿಭಟನೆ ಅನಂತರ ಹಿಂಸಾಚಾರಕ್ಕೆ ತಿರುಗಿತ್ತು. ಇದರಿಂದ ಸಾರ್ವಜನಿಕ ಸೊತ್ತಿಗೆ ಹಾನಿ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಹಾಗೂ ಅವರ ಸಹವರ್ತಿಗಳ ವಿರುದ್ಧ ಗಲಭೆ, ಹಿಂಸಾಚಾರಕ್ಕೆ ಉತ್ತೇಜನ ಹಾಗೂ ಸಾರ್ವಜನಿಕ ಆಸ್ತಿ ನಾಶಪಡಿಸಿದ ಪ್ರಕರಣ ದಾಖಲಿಸಲಾಗಿತ್ತು.
ಹಾರ್ದಿಕ್ ಪಟೇಲ್ ವಿಚಾರಣೆಗೆ ಹಾಜರಾಗಲು ಮತ್ತೆ ಮತ್ತೆ ವಿಫಲರಾದ ಹಿನ್ನೆಲೆಯಲ್ಲಿ ಈ ಪ್ರಕರಣ ನ್ಯಾಯಾಲಯದಲ್ಲಿ ಮುಂದುವರಿಯುತ್ತಲೇ ಇತ್ತು.
ಅವರ ನಿರಂತರ ಗೈರು ಹಾಜರಿಯಿಂದ ಅಸಮಾಧಾನಗೊಂಡ ನ್ಯಾಯಾಲಯ ಹಾರ್ದಿಕ್ ಪಟೇಲ್ ಅವರನ್ನು ಕೂಡಲೇ ಬಂಧಿಸುವಂತೆ ಆದೇಶ ಜಾರಿ ಮಾಡಿತ್ತು.





