ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ: ಬಿಜೆಪಿ ಕೇಂದ್ರ ನಾಯಕತ್ವದ ಮುಂದಿನ ಕ್ರಮದ ಮೇಲೆ ಕಣ್ಣು

Photo Credit: PTI
ಇಂಫಾಲ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ವಿಧಾನಸಭೆಯನ್ನು ಅನಿರ್ದಿಷ್ಟಾವಧಿ ಕಾಲ ಅಮಾನತಿನಲ್ಲಿರಿಸಿದ ನಂತರ, ಇದೀಗ ಎಲ್ಲರ ಕಣ್ಣು ಬಿಜೆಪಿಯ ಕೇಂದ್ರ ನಾಯಕತ್ವದ ಮುಂದಿನ ಕ್ರಮದ ಮೇಲೆ ನೆಟ್ಟಿದೆ.
ಕೇಂದ್ರ ಸರಕಾರವು ರಾಷ್ಟ್ರಪತಿ ಆಳ್ವಿಕೆಯನ್ನು ಘೋಷಿಸಿದ ನಂತರ, ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆಯಿಂದ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾದ ನಂತರ, ಗುರುವಾರ ಕೇಂದ್ರ ಸರಕಾರವು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ, ವಿಧಾನಸಭೆಯನ್ನು ಅನಿರ್ದಿಷ್ಟಾವಧಿ ಕಾಲ ಅಮಾನತಿನಲ್ಲಿರಿಸಿತ್ತು.
ಮುಖ್ಯಮಂತ್ರಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿಯಾದ ಸಂಬಿತ್ ಪಾತ್ರಾ ಹಾಗೂ ಮಣಿಪುರ ಶಾಸಕರ ನಡುವೆ ನಡೆದ ಹಲವು ಸುತ್ತಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿತ್ತು.
ಮಣಿಪುರದ ಬಿಜೆಪಿ ಸರಕಾರದ ನೇತೃತ್ವ ವಹಿಸಿದ್ದ ಮುಖ್ಯಡಮಂತ್ರಿ ಎನ್.ಬಿರೇನ್ ಸಿಂಗ್, ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಪ್ರಾರಂಭಗೊಂಡು ಸುಮಾರು 21 ತಿಂಗಳು ಕಳೆದ ನಂತರ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ಸಂಘರ್ಷದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಮಣಿಪುರ ವಿಧಾನಸಭೆಯ ಅವಧಿ 2027ರವರೆಗೆ ಇದೆ.







