ಪ್ರಣಬ್ ಮುಖರ್ಜಿ ಅವರ ʼಘರವಾಪ್ಸಿʼ ಕುರಿತ ಭಾಗವತ್ ಹೇಳಿಕೆಗೆ ಕ್ಯಾಥೋಲಿಕ್ ಬಿಷಪ್ಗಳ ಸಮಿತಿ ತೀವ್ರ ಆಕ್ರೋಶ

PC :hindustantimes
ಹೊಸದಿಲ್ಲಿ: ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿದ್ದಾಗ "ಘರ್ ವಾಪಸಿ" ಇಲ್ಲದಿದ್ದರೆ ಬುಡಕಟ್ಟು ಜನಾಂಗದವರು ರಾಷ್ಟ್ರ ವಿರೋಧಿಗಳಾಗಿರುತ್ತಿದ್ದರು ಎಂದು ಹೇಳಿದ್ದರು ಎಂದು ಹೇಳಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಗುರುವಾರ ನಡೆದ ಭಾರತದ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನವು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಥೋಲಿಕ್ ಬಿಷಪ್ಗಳ ಸಂಘಟನೆಯಾದ ಸಿಬಿಸಿಐ, ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವತ್ ಅವರು, ರಾಷ್ಟ್ರಪತಿಯಾಗಿದ್ದಾಗ ಮುಖರ್ಜಿ ಅವರು ಘರ್ ವಾಪಸಿಯನ್ನು ಮೆಚ್ಚಿದ್ದರು. ಸಂಘದ ಪುನರ್ಮತಾಂತರದ ಮಾಡದೇ ಇರುತ್ತಿದ್ದರೆ ಆದಿವಾಸಿಗಳ ಒಂದು ವರ್ಗವು "ರಾಷ್ಟ್ರ ವಿರೋಧಿ" ಆಗುತ್ತಿತ್ತು ಭಾಗವತ್ ಅವರ ಬಳಿ ಹೇಳಿದ್ದರು ಎಂದು ಭಾಗವತ್ ಉಲ್ಲೇಖಿಸಿದ್ದರು.
ಸಿಬಿಸಿಐ ಈ ವರದಿಯನ್ನು "ಆಘಾತಕಾರಿ" ಎಂದು ಕರೆದಿದೆ. "ಭಾರತದ ಮಾಜಿ ರಾಷ್ಟ್ರಪತಿಯೊಬ್ಬರಿಗೆ ಸಂಬಂಧಿಸಿದ ವೈಯಕ್ತಿಕ ಸಂಭಾಷಣೆಯನ್ನು ಸಂಘಟನೆಯು ಸ್ವಾರ್ಥ ಹಿತಾಸಕ್ತಿಯೊಂದಿಗೆ ಅವರ ಮರಣದ ನಂತರ ಹೇಳುತ್ತಿರುವುದು ರಾಷ್ಟ್ರೀಯ ಪ್ರಾಮುಖ್ಯತೆಯ ಗಂಭೀರ ಸಮಸ್ಯೆಯನ್ನು ಹುಟ್ಟುಹಾಕುತ್ತದೆ" ಎಂದು ಸಿಬಿಸಿಐ ಹೇಳಿಕೊಂಡಿದೆ.
"ಆರ್ಥಿಕವಾಗಿ ವಂಚಿತರಾದ ಬುಡಕಟ್ಟು ಜನಾಂಗದವರ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ, ವಿಎಚ್ಪಿ ಮತ್ತು ಸಂಘಪರಿವಾರದ ಸಂಘಟನೆಗಳ ಹಿಂಸಾತ್ಮಕ ಘರ್ ವಾಪಸಿ ಕಾರ್ಯಕ್ರಮವು ನಿಜವಾದ ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲವೇ?" ಎಂದು ಅದು ಪ್ರಶ್ನಿಸಿದೆ.
"ನಾವು, ಶೇಕಡಾ 2.3 ರಷ್ಟು ಭಾರತೀಯ ನಾಗರಿಕರು, ಕ್ರಿಶ್ಚಿಯನ್ನರು, ಇಂತಹ ಪ್ರಚಾರದಿಂದ ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದೇವೆ. ಪ್ರಣವ್ ಮುಖರ್ಜಿ ಜೀವಂತವಾಗಿದ್ದಾಗ ಭಾಗವತ್ ಅದರ ಬಗ್ಗೆ ಏಕೆ ಮಾತನಾಡಲಿಲ್ಲ”, ಎಂದು ಸಿಬಿಸಿಐ ಪ್ರಶ್ನಿಸಿದೆ.
ಸಿಬಿಸಿಐ ಬಿಡುಗಡೆ ಮಾಡಿದ ಹೇಳಿಕೆಯ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರೇನ್ ಅವರು,"ಮಾತನಾಡಿ. ಇದು ಆರಂಭ!. ಡಾ. ಮೋಹನ್ ಭಾಗವತ್ ಮತ್ತು ಆರೆಸ್ಸೆಸ್ ಕ್ರಿಶ್ಚಿಯನ್ ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ಮಾಡಿದ ಹೇಳಿಕೆಗಳನ್ನು ಖಂಡಿಸಿ ಬಿಷಪ್ಗಳ ಸಂಸ್ಥೆ ಹೇಳಿಕೆ ನೀಡಿದೆ" ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.
ಕ್ರಿಸ್ಮಸ್ ದಿನವನ್ನು "ಉತ್ತಮ ಆಡಳಿತ ದಿನ"ವನ್ನಾಗಿ ಏಕೆ ಪರಿವರ್ತಿಸಲಾಗಿದೆ ಎಂಬುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆಗಳನ್ನು ಕೇಳಬೇಕು ಎಂದು ಒ'ಬ್ರೇನ್ ಆಗ್ರಹಿಸಿದ್ದಾರೆ.







