ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಲಿರುವ ಪ್ರತಿಪಕ್ಷ : ವರದಿ

ಸಿಇಸಿ ಜ್ಞಾನೇಶ್ ಕುಮಾರ್ | Photo Credit : PTI
ಹೊಸದಿಲ್ಲಿ,ಮಾ.9: ಮುಂಬರುವ ದಿನಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ (ದೋಷಾರೋಪಣೆ) ನಿರ್ಣಯವನ್ನು ಮಂಡಿಸುವ ಸಾಧ್ಯತೆಯಿದೆ.
ಬಲ್ಲ ಮೂಲಗಳ ಪ್ರಕಾರ ಲೋಕಸಭೆಯಲ್ಲಿ ಟಿಎಂಸಿಯ ಉಪನಾಯಕಿ ಶತಾಬ್ದಿ ರಾಯ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ನಡೆದ ಇಂಡಿಯಾ ಬಣದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದರು.
ಪ.ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಮತದಾರರ ಪಟ್ಟಿಗಳಿಂದ ಹೆಸರುಗಳನ್ನು ಅಳಿಸಿದ್ದನ್ನು ವಿರೋಧಿಸಿ ರಾಜ್ಯದ ಮುಖ್ಯಮಂತ್ರಿಮಮತಾ ಬ್ಯಾನರ್ಜಿಯವರು ಮಾ.6ರಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ರಾಯ್ ಒತ್ತಿ ಹೇಳಿದರು. ಚುನಾವಣಾ ಆಯೋಗವು ಪ.ಬಂಗಾಳದ ಅಂತಿಮ ಮತದಾರರ ಪಟ್ಟಿಗಳನ್ನು ಫೆ.28ರಂದು ಬಿಡುಗಡೆಗೊಳಿಸಿದೆ.
ಕುಮಾರ ವಿರುದ್ಧ ದೋಷಾರೋಪಣೆ ನಿರ್ಣಯವನ್ನು ಮಂಡಿಸುವ ಮೂಲಕ ಪ್ರತಿಪಕ್ಷವು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ರಾಯ್ ವಾದವನ್ನು ಇತರ ಪ್ರತಿಪಕ್ಷ ನಾಯಕರು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿದವು.
ಟಿಎಂಸಿ ನಿರ್ಣಯವನ್ನು ಮಂಡಿಸಲಿದೆ. ಅದನ್ನು ಮಂಡಿಸುವ ಸದನ ಸೇರಿದಂತೆ ವಿವರಗಳನ್ನು ಪ್ರತಿಪಕ್ಷಗಳು ಚರ್ಚಿಸಲಿವೆ. ಯಾವುದೇ ಸದನದಲ್ಲಿ ನಿರ್ಣಯವನ್ನು ಸಲ್ಲಿಸಲು ಅಗತ್ಯ ಸಂಖ್ಯಾಬಲ ತಮ್ಮ ಬಳಿಯಿದೆ ಎಂದು ಹಿರಿಯ ಪ್ರತಿಪಕ್ಷ ನಾಯಕರೋರ್ವರು ತಿಳಿಸಿದರು.
ಸಂವಿಧಾನದ ವಿಧಿ 324(5)ರ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಂತೆ ಮುಖ್ಯ ಚುನಾವಣಾ ಆಯುಕ್ತರನ್ನೂ ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಪದಚ್ಯುತಗೊಳಿಸಬಹುದು.







