ಕೃಷ್ಣ ಜಲ ವಿವಾದ: ನ್ಯಾಯಾಧೀಕರಣ-2 ಅವಧಿ ವಿಸ್ತರಣೆ
ಕೇಂದ್ರ ಸರಕಾರದ ಕ್ರಮ ಕರ್ನಾಟಕಕ್ಕೆ ಆಘಾತಕಾರಿ ಎಂದ ಸಚಿವ ಎಚ್.ಕೆ.ಪಾಟೀಲ್

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೃಷ್ಣಾ ನದಿಗೆ ಸಂಬಂಧಿಸಿ ದೀರ್ಘಕಾಲದಿಂದ ಇರುವ ಅಂತರ್ರಾಜ್ಯ ಜಲ ವಿವಾದ ನ್ಯಾಯಾಧೀಕರಣ-2ರ (ಬ್ರಿಜೇಶ್ ಕಮಾರ್ ಆಯೋಗ) ಅಂತಿಮ ವರದಿ ಸಲ್ಲಿಸಲು ನ್ಯಾಯಮಂಡಳಿಗೆ ಮತ್ತೆ 1 ವರ್ಷ ಕಾಲಾವಕಾಶವನ್ನು ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿದೆ.
ನ್ಯಾಯಮಂಡಳಿಯ ಅವಧಿಯನ್ನು 2026ರ ಜುಲೈ 31ರವರೆಗೆ ವಿಸ್ತರಿಸಿ ಬುಧವಾರ ಆದೇಶ ಹೊರಡಿಸಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಣ ನೀರು ಹಂಚಿಕೆ ವಿವಾದಗಳ ಮಧ್ಯಸ್ಥಿಕೆ ವಹಿಸಲು 2004ರಲ್ಲಿ ನ್ಯಾಯಮಂಡಳಿ ರಚಿಸಲಾಗಿತ್ತು. ನ್ಯಾಯಮಂಡಳಿ 2010ರಲ್ಲಿ ಆರಂಭಿಕ ವರದಿ ಸಲ್ಲಿಸಿತ್ತು. ಮೂರು ರಾಜ್ಯಗಳಿಗೆ ನೀರು
ಹಂಚಿಕೆ ಮಾಡಿತ್ತು. ಆದರೆ, ವರದಿಯ ಕೆಲವೊಂದು ಅಂಶಗಳಿಗೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಬಳಿಕ ನ್ಯಾಯಮಂಡಳಿಯ ಅವಧಿಯನ್ನು ವಿಸ್ತರಿಸಲಾಗಿತ್ತು.
‘ವಿಸ್ತರಣೆ ಆಘಾತಕಾರಿ’:
ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-2 (ಬ್ರಿಜೇಶ್ ಕಮಾರ್ ಆಯೋಗ)ರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿರುವ ಕೇಂದ್ರ ಸರಕಾರದ ಕ್ರಮವು, ಇತ್ಯರ್ಥವಾಗಿರುವ ಜಲ ವಿವಾದದಲ್ಲಿ ನ್ಯಾಯ ಅಪೇಕ್ಷಿಸುತ್ತಿದ್ದ ಕರ್ನಾಟಕಕ್ಕೆ ಆಘಾತ ತಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







