ಮಿಲಿಟರಿ ಕಾರ್ಯಾಚರಣೆಗಳ ನೇರ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರದ ಆದೇಶ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಗಡಿಯಲ್ಲಿ ಭಾರತ-ಪಾಕ್ ನಡುವೆ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ ರಕ್ಷಣಾ ಪಡೆಗಳ ಕಾರ್ಯಾಚರಣೆಗಳು ಹಾಗೂ ಭದ್ರತಾಪಡೆಗಳ ಚಲನವಲನಗಳ ಕುರಿತು ನೇರ ಪ್ರಸಾರ ಮಾಡುವುದನ್ನು ಹಾಗೂ ಸೇನಾ ಕಾರ್ಯಾಚರಣೆಗಳನ್ನು ನೈಜ ಸಮಯದಲ್ಲಿ ವರದಿ ಮಾಡುವುದರಿಂದ ದೂರವಿರುವಂತೆ ಕೇಂದ್ರರಕ್ಷಣಾ ಸಚಿವಾಲಯವು ಶುಕ್ರವಾರ ಎಲ್ಲಾ ಮಾಧ್ಯಮಸಂಸ್ಥೆಗಳು, ಡಿಜಿಟಲ್ ಪ್ಲಾಟ್ಫಾರಂಗಳು ಹಾಗೂ ವರದಿಗಾರರಿಗೆ ಸೂಚನೆ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವಾಲಯವು ಸೂಕ್ಶ್ಮವಾದ ಮಾಹಿತಿಗಳನ್ನು ಅಕಾಲಿಕವಾಗಿ ಬಹಿರಂಗಪಡಿಸುವುದರಿಂದ ಸೇನಾಪಡೆಗಳ ಕಾರ್ಯನಿರ್ವಹಣಾ ಪರಿಣಾಮಕಾರಿತ್ವದ ಜೊತೆ ರಾಜಿ ಮಾಡಿದಂತಾಗುವುದು ಹಾಗೂ ಯೋಧರ ಪ್ರಾಣಗಳಿಗೆ ಅಪಾಯವುಂಟಾಗುವ ಸಾಧ್ಯತೆಯಿದೆಯೆಂದು ಹೇಳಿದೆ.
ಕಾರ್ಗಿಲ್ ಯುದ್ಧ, 26/11 ಮುಂಬೈ ಭಯೋತ್ಪಾದಕ ದಾಳಿ ಹಾಗೂ ಕಂದಹಾರ್ ವಿಮಾನಅಪಹರಣ ಪ್ರಕರಣಗಳು, ಅಕಾಲಿಕ ವರದಿಯಿಂದ ಉಂಟಾಗುವ ಅಪಾಯಗಳನ್ನು ತೋರಿಸಿಕೊಟ್ಟಿವೆ ಎಂದು ಸಚಿವಾಲಯ ಪೋಸ್ಟ್ನಲ್ಲಿ ತಿಳಿಸಿದೆ.
ಕೇಬಲ್ ಟೆಲಿವಿಶನ್ ನೆಟ್ವರ್ಕ್ಸ್ (ತಿದ್ದುಪಡಿ) ನಿಯಮಗಳ 6 (1) (ಪಿ) ಪರಿಚ್ಛೇದದ ಪ್ರಕಾರ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಸಂದರ್ಭದಲ್ಲಿ ನಿಯೋಜಿತ ಅಧಿಕಾರಿಗಳು ಮಾತ್ರವೇ ನಿಯಮಿತವಾಗಿ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ಅವಕಾಶವಿರುತ್ತದೆ.ಈ ನಿಮಯಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ನೇರ ಪ್ರಸಾರವನ್ನು ನಿಷೇಧಿಸುತ್ತದೆ ಹಾಗೂ ಅಧಿಕೃತ ಸರಕಾರಿ ಅಧಿಕಾರಿಗಳ ಮೂಲಕವೇ ಕಾರ್ಯಾಚರಣೆಯ ತಾಜಾವಿವರಗಳನ್ನು ಬಹಿರಂಗಪಡಿಸುವುದಕ್ಕೆ ಅವಕಾಶ ನೀಡುತ್ತದೆ ಎಂದು ಎಚ್ಚರಿಕೆ ಸಂದೇಶದಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಕೂಡಾ ಮಾಧ್ಯಮ ವೇದಿಕೆಗಳು ಹಾಗೂ ವ್ಯಕ್ತಿಗಳಿಗೆ , ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳ ಸುದ್ದಿಗಳ ಪ್ರಕಟಣೆಯಲ್ಲಿ ಅವರ ಕಾನೂನಾತ್ಮಕ ಹಾಗೂ ನೈತಿಕ ಹೊಣೆಗಾರಿಕೆಗಳ ಕುರಿತಾಗಿ ನಿರ್ದೇಶನವೊಂದನ್ನು ಹೊರಡಿಸಿದೆ.