ಎರಡು ಟ್ರಕ್ ಗಳ ನಡುವೆ ಢಿಕ್ಕಿ: ನಾಲ್ವರು ಯಾತ್ರಾರ್ಥಿಗಳು ಮೃತ್ಯು, ಒಬ್ಬರ ಸ್ಥಿತಿ ಗಂಭೀರ
ಹೊಸದಿಲ್ಲಿ: ಉತ್ತರ ದಿಲ್ಲಿಯ ಅಲಿಪುರದ ಜಿಟಿ ಕರ್ನಾಲ್ ರಸ್ತೆಯಲ್ಲಿ ಮಧ್ಯರಾತ್ರಿ ಎರಡು ಟ್ರಕ್ ಗಳು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ಗಳಲ್ಲಿ ಒಂದು ಕನ್ವರ್ ಯಾತ್ರಿಗಳನ್ನು (ಯಾತ್ರಾರ್ಥಿಗಳು) ಹರಿದ್ವಾರಕ್ಕೆ ಕರೆದೊಯ್ಯುತ್ತಿತ್ತು. ದಿಲ್ಲಿಯತ್ತ ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ದಾಟಿ ಹರಿದ್ವಾರಕ್ಕೆ ತೆರಳುತ್ತಿದ್ದ ಮತ್ತೊಂದು ಟ್ರಕ್ ಗೆ ಡಿಕ್ಕಿ ಹೊಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ನಲ್ಲಿ ಕನಿಷ್ಠ 20 ಕನ್ವರ್ ಯಾತ್ರಿಗಳು ಪ್ರಯಾಣಿಸುತ್ತಿದ್ದರು
. "ಒಟ್ಟು 15 ಜನರು ಗಾಯಗೊಂಡಿದ್ದಾರೆ ಹಾಗೂ 4 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಯಾತ್ರಿಗಳನ್ನು ಪತ್ತೆಹಚ್ಚಲಾಗುತ್ತಿದೆ" ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಎರಡೂ ಟ್ರಕ್ ಗಳಿಗೆ ಹಾನಿಯಾಗಿರುವುದು ಅಪಘಾತದ ತೀವ್ರತೆಯನ್ನು ಸೂಚಿಸುತ್ತದೆ.
ಡಿವೈಡರ್ ದಾಟಿದ ಇನ್ನೊಂದು ಲಾರಿ ಚಾಲಕ ಪರಾರಿಯಾಗಿದ್ದಾನೆ. ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.