ಎಲ್ಲ ಆಯಾಮಗಳಲ್ಲಿ ‘ಮೋದಾನಿ ಹಗರಣ’ದ ತನಿಖೆ ಮಂದುವರಿಸುವ ಅಗತ್ಯವಿದೆ : ಕಾಂಗ್ರೆಸ್

ಜೈರಾಮ ರಮೇಶ್ | PC : PTI
ಹೊಸದಿಲ್ಲಿ,ಸೆ.19: ಅದಾನಿ ‘ಹಗರಣ’ವು ಸೆಬಿ ತನಿಖಾ ವ್ಯಾಪ್ತಿಯನ್ನು ಮೀರಿರುವುದರಿಂದ ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಹಿಂಡೆನ್ಬರ್ಗ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಸೆಬಿ ಗುರುವಾರ ಅದಾನಿ ಗ್ರೂಪ್ಗೆ ಕ್ಲೀನ್ ಚಿಟ್ ನೀಡಿದೆ.
ವ್ಯವಸ್ಥಿತ ಸುದ್ದಿ ಶೀರ್ಷಿಕೆಗಳಿಗೆ ವ್ಯತಿರಿಕ್ತವಾಗಿ ‘ಮೋದಾನಿ ಎಂಟರ್ಪೈಸಸ್’ನ ವಾಣಿಜ್ಯ ಪಾಲುದಾರರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೆಬಿ ತನಿಖೆ ನಡೆಸುತ್ತಿರುವ 20 ವಿಷಯಗಳ ಪೈಕಿ ಎರಡರಲ್ಲಿ ಮಾತ್ರ ಅದರಿಂದ ಕ್ಲೀನ್ ಚಿಟ್ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ ರಮೇಶ್ ಅವರು, ಎಲ್ಲ ಆಯಾಮಗಳಲ್ಲಿ ‘ಮೋದಾನಿ ಹಗರಣ’ದ ತನಿಖೆಯನ್ನು ನಡೆಸುವುದು ನಿರಂತರ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
‘ಹಮ್ ಅದಾನಿ ಕೆ ಹೈ ಕೌನ್’ ಎಂಬ 100 ಪ್ರಶ್ನೆಗಳ ಸರಣಿಯಲ್ಲಿ ಪಕ್ಷವು ಕೇಳಿದ್ದ ಪ್ರಶ್ನೆಗಳನ್ನೂ ಹಂಚಿಕೊಂಡಿರುವ ರಮೇಶ್, ಇವುಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.





