ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಹಿಂದೆ ಸರಿದ ಅಭಿವೃದ್ಧಿ: ಕಾಂಗ್ರೆಸ್ನಿಂದ ‘ಆರ್ಥಿಕತೆಯ ನೈಜ ಸ್ಥಿತಿಗತಿ ವರದಿ 2026’ ಬಿಡುಗಡೆ

Credit: X/INCIndia
ಹೊಸದಿಲ್ಲಿ,ಜ.27: ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸುಂದರವಾದ ಚಿತ್ರಣವನ್ನು ನೀಡುವುದಕ್ಕಾಗಿ ಮೋದಿ ಸರಕಾರವು ದತ್ತಾಂಶಗಳನ್ನು ತಿರುಚುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಮಂಗಳವಾರ ಆಪಾದಿಸಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಹಾಗೂ ಕ್ಷೀಣಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳು, ಭಾರತದ ಆರ್ಥಿಕ ಬೆಳವಣಿಗೆಯನ್ನು ಪ್ರಶ್ನಾರ್ಹವಾಗಿಸಿದೆ ಎಂದರು.
ಸಂಸತ್ನ ಬಜೆಟ್ ಅಧಿವೇಶನದ ಆರಂಭಕ್ಕೆ ಮುನ್ನಾ ದಿನವಾದ ಮುಂಗಳವಾರ ಕಾಂಗ್ರೆಸ್, ‘ನೈಜ ಆರ್ಥಿಕ ಸ್ಥಿತಿಗತಿ ವರದಿ 2026’’ ಅನ್ನು ಬಿಡುಗಡೆಗೊಳಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರವು ದೇಶದ ಆರ್ಥಿಕತೆಯ ಕುರಿತು ಸುಳ್ಳು ಮಾಹಿತಿಯನ್ನು ನೀಡುವುದಕ್ಕೆ ಮೊದಲೇ ಈ ವಾಸ್ತವಾಂಶಗಳನ್ನು ಜನರ ಮುಂದಿಡುತ್ತಿರುವುದಾಗಿ ತಿಳಿಸಿದೆ.
‘‘ಅಸಮಾನತೆಯ ಏರಿಕೆ, ಹಿಂದೆ ಸರಿದ ಅಭಿವೃದ್ಧಿ’’ ಎಂಬ ಶೀರ್ಷಿಕೆಯ ಈ ವರದಿಯನ್ನು ಕಾಂಗ್ರೆಸ್ ವಕ್ತಾರರಾದ ರಾಜೀವ್ ಗೌಡ ಹಾಗೂ ಅಮಿತಾಭ್ ದುಬೆ ಬಿಡುಗಡೆಗೊಳಿಸಿದರು.
‘‘ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಅಂಕಿಅಂಶಗಳಿಗೆ ಸಿ ದರ್ಜೆಯನ್ನು ನೀಡಿದೆ. ಹಣದುಬ್ಬರವು 0.5 ಶೇ. ಹಣದುಬ್ಬರ, ಜನರ ಬದುಕಿನಲ್ಲಿ ವಾಸ್ತವವಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತದ ಒಟ್ಟು ಆಂತರಿಕ ಉತ್ಪನ್ನವು 2025-26ನೇ ಸಾಲಿನ ಮೊದಲಾರ್ಧದದಲ್ಲಿ ಶೇ.8.4ರಷ್ಟು ಬೆಳವಣಿಗೆಯನ್ನು ಕಂಡಿತ್ತು. ಆದರೆ ಎಂಟು ಕೋಟಿ ಕೈಗಾರಿಕೆಗಳ ಸೂಚ್ಯಂಕವು ಕೇವಲ 2.9 ಶೇಕಡ ಬೆಳವಣಿಗೆಯನ್ನು ತೋರಿಸಿಕೊಟ್ಟಿದೆ. ಇದೇ ವೇಲೆ 2025ರಲ್ಲಿ ಭಾರತದ ರೂಪಾಯಿ, ಏಶ್ಯದ ಅತ್ಯಂತ ಕಳಪೆ ನಿರ್ವಹಣೆಯ ಕರೆನ್ಸಿಯಾಗಿದೆ ಎಂದು ರಾಜೀವ್ಗೌಡ ಹೇಳಿದರು.
2017-18ರಿಂದ 2023-24ರ ನಡುವೆ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಸಂಖ್ಯೆ 12.1 ಶೇಕಡಿಂದ 11.4 ಶೇಕಡಕ್ಕೆ ಇಳಿದರೆ, ಕೃಷಿ ವಲಯದಲ್ಲಿ ಅವರ ಸಂಖ್ಯೆ 44.1 ಶೇಕಡದಿಂದ 46.1 ಶೇಕಡಕ್ಕೆ ಏರಿದೆ. ಕಡಿಮೆ ಮೌಲ್ಯದ, ಖಾಯಂ ಅಲ್ಲದ ಅಥವಾ ಅಲ್ಪಾವಧಿಯ ಉದ್ಯೋಗಿಗಳ ಸಂಖ್ಯೆಯಲ್ಲಿ ಮಾತ್ರವೇ ಹೆಚ್ಚಳವಾಗಿದೆ.
ದೇಶದ ಒಟ್ಟು ಜನಸಂಖ್ಯೆ ಶೇ.10ರಷ್ಟು ಮಂದಿ ರಾಷ್ಟ್ರೀಯ ಆದಾಯದ ಶೇ.58ರಷ್ಟನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದಾರೆ.
ಸಮಾಜದ ತಳಮಟ್ಟದಲ್ಲಿ ಇರುವವರು ಶೇ.15ರಷ್ಟು ಆದಾಯವನ್ನು ಮಾತ್ರವೇ ಗಳಿಸುತ್ತಿದ್ದಾರೆ.
ಭಾರತದ ಒಟ್ಟು ಸಂಪತ್ತಿನ ಶೇ.65ರಷ್ಟು ದೇಶದ ಶೇ.10ರಷ್ಟು ಶ್ರೀಮಂತರ ವಶದಲ್ಲಿದೆ.
ಪ್ರತಿ ಐವರು ಭಾರತೀಯರ ಪೈಕಿ ನಾಲ್ವರು 200ರೂ.ಗಿಂತಲೂ ಕಡಿಮೆ ದೈನಂದಿನ ಆದಾಯ ಹೊಂದಿದ್ದಾರೆ.
ಕೌಟುಂಬಿಕ ಆರ್ಥಿಕ ಉಳಿತಾಯವು ಶೇ.5.2ಕ್ಕೆ ಇಳಿದಿದ್ದು, ಇದು ಐದು ದಶಕಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. 2019ರಲ್ಲಿ ಕೌಟುಂಬಿಕ ಸಾಲದ ಪ್ರಮಾಣವು ಶೇ.35ರಿಂದ ಶೇ.41ಕ್ಕೆ ಏರಿದೆ.







