ಗೌತಮ ಬುದ್ಧ, ಸಮಾಜ ಸುಧಾರಕರ ವಿರುದ್ಧ ಟೀಕೆ: ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ಎಫ್ಐಆರ್
![ಗೌತಮ ಬುದ್ಧ, ಸಮಾಜ ಸುಧಾರಕರ ವಿರುದ್ಧ ಟೀಕೆ: ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ಎಫ್ಐಆರ್ ಗೌತಮ ಬುದ್ಧ, ಸಮಾಜ ಸುಧಾರಕರ ವಿರುದ್ಧ ಟೀಕೆ: ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ಎಫ್ಐಆರ್](https://www.varthabharati.in/h-upload/2023/08/07/1177979-whatsapp-image-2023-08-07-at-93604-pm.webp)
ಸಂಭಾಜಿ ಭಿಡೆ. | Photo: PTI
ಥಾಣೆ (ಮಹಾರಾಷ್ಟ್ರ): ಗೌತಮ ಬುದ್ಧ ಹಾಗೂ ಸಮಾಜ ಸುಧಾರಕರಾದ ಜ್ಯೋತಿಬಾ ಫುಲೆ ಮತ್ತು ಪೆರಿಯಾರ್ ನಾಯ್ಕರ್ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ ಆರೋಪದಲ್ಲಿ ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ನವಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೋರ್ವರು ಸೋಮವಾರ ತಿಳಿಸಿದರು.
ಕಳೆದ ತಿಂಗಳು ತನ್ನ ಭಾಷಣದಲ್ಲಿ ಮಹಾತ್ಮಾ ಗಾಂಧಿಯವರ ವಂಶಾವಳಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದ ಆರೋಪದಲ್ಲಿ ಅಮರಾವತಿಯಲ್ಲಿ ಭಿಡೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಸಕ್ತ ಪ್ರಕರಣದಲ್ಲಿ ನವಿ ಮುಂಬೈನ ಪನವೇಲ್ ನಿವಾಸಿಯಾಗಿರುವ ವಕೀಲ ಅಮಿತ್ ಕಟಾರ್ನವರೆ ಭಿಡೆ ವಿರುದ್ಧ ದೂರು ದಾಖಲಿಸಿದ್ದಾರೆ. ಭಿಡೆಯವರ ಹೇಳಿಕೆಗಳು ಈ ಸಮಾಜ ಸುಧಾರಕರನ್ನು ಗೌರವಿಸುವವರ ಭಾವನೆಗಳಿಗೆ ನೋವನ್ನುಂಟು ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.
ಸಮಾಜ ಸುಧಾರಕರ ವಿರುದ್ಧ ಭಿಡೆ ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಕೆಲವು ಆನ್ಲೈನ್ ವೀಡಿಯೊಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಿರಡಿ ಸಾಯಿಬಾಬಾ ಮತ್ತು ಫುಲೆ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಆ.1ರಂದು ನಾಸಿಕ್ ಪೊಲೀಸರು ಭಿಡೆ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಪೊಲೀಸರು ಭಿಡೆ ಈ ಹೇಳಿಕೆಗಳನ್ನು ನೀಡಿದ್ದ ಅಮರಾವತಿಯ ಪೊಲೀಸರಿಗೆ ಎಫ್ಐಆರ್ನ್ನು ವರ್ಗಾಯಿಸಿದ್ದರು.