'ನಿಷ್ಪಕ್ಷಪಾತವಾಗಿರಬೇಕು': ಸತ್ಯೇಂದರ್ ಜೈನ್ ಪ್ರಕರಣದಲ್ಲಿ ಈಡಿ ಅಧಿಕಾರಿಗಳಿಗೆ ದಿಲ್ಲಿ ಕೋರ್ಟ್ ತರಾಟೆ

ಸತ್ಯೇಂದರ್ ಜೈನ್ (Photo: PTI)
ಹೊಸದಿಲ್ಲಿ: ಆಪ್ ನಾಯಕ ಸತ್ಯೇಂದರ್ ಜೈನ್ ಅವರ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈಡಿ) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ದಾರಿತಪ್ಪಿಸುವಂತಿದೆ ಎಂದು ದಿಲ್ಲಿ ನ್ಯಾಯಾಲಯ ಟೀಕಿಸಿದೆ.
2022ರ ಜೂನ್ 7ರಂದು ಸತ್ಯೇಂದರ್ ಕುಮಾರ್ ಜೈನ್ ಮತ್ತು ಇತರರ ನಿವಾಸದಲ್ಲಿ ಶೋಧ ನಡೆಸಲಾಗಿದೆ ಮತ್ತು 2.85 ಕೋಟಿ ಮೌಲ್ಯದ ನಗದು ಮತ್ತು 1.80 ಕೆಜಿ ಮೌಲ್ಯದ ಚಿನ್ನದ ನಾಣ್ಯಗಳು ಸೇರಿದಂತೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿತ್ತು. ಆದರೆ, ವಾಸ್ತವವಾಗಿ ಆ ವಸ್ತುಗಳನ್ನು ಜೈನ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿರಲಿಲ್ಲ.
"ಸತ್ಯೇಂದ್ರ ಕುಮಾರ್ ಜೈನ್ ಮತ್ತು ಇತರರ ನಿವಾಸದಲ್ಲಿ" ಎಂದು ಈಡಿ ಪೋಸ್ಟ್ ಮಾಡಿರುವುದರಿಂದ ನಗದು ಮತ್ತು ಚಿನ್ನ ಸೇರಿದಂತೆ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಭಾವನೆ ಸೃಷ್ಟಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಜೈನ್ ಅವರ ಸ್ಪಷ್ಟ ಹೆಸರನ್ನು ಉಲ್ಲೇಖಿಸಿ "ಮತ್ತು ಇತರರು" ಎಂದು ಬರೆದಿರುವುದರಿಂದ ಕಾರ್ಯಾಚರಣೆಯ ವೇಳೆ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಸ್ಪಷ್ಟವಾಗಿ ʼಇತರರʼ ಮೇಲೆ ಆರೋಪಿಸಲು ಈಡಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.







