2019ರ ಅಯೋಧ್ಯೆ ತೀರ್ಪನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ : ಸಿಜೆಐ ಚಂದ್ರಚೂಡ್ ಅವರ ಹೇಳಿಕೆ ಹಿನ್ನೆಲೆ ಅಯೋಧ್ಯೆ ತೀರ್ಪನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಗೆ ವಕೀಲ ಮೆಹಮೂದ್ ಪ್ರಾಚಾ ಅವರಿಗೆ ದಿಲ್ಲಿ ನ್ಯಾಯಾಲಯ 6 ಲಕ್ಷ ರೂ. ದಂಡ ವಿಧಿಸಿದೆ.
ಸುಪ್ರೀಂ ಕೋರ್ಟ್ನ 2019ರ ಅಯೋಧ್ಯಾ ತೀರ್ಪನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಕೀಲ ಮೆಹಮೂದ್ ಪ್ರಾಚಾ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ ವೈ ಚಂದ್ರಚೂಡ್, ಕಳೆದ ವರ್ಷ ಮಾಡಿದ ಭಾಷಣದಲ್ಲಿ, ಅಯೋಧ್ಯೆ ತೀರ್ಪು “ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ಒದಗಿಸಿದ ಪರಿಹಾರದ ಪ್ರಕಾರ ನೀಡಲಾಗಿದೆ” ಎಂದು ಹೇಳಿರುವುದನ್ನು ಪ್ರಾಚಾ ಪ್ರಶ್ನಿಸಿದ್ದರು.
ಪಟಿಯಾಲ ಹೌಸ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಪ್ರಾಚಾ ಅವರ ವಾದವು ಕ್ಷುಲ್ಲಕವಾದುದು, ತಪ್ಪು ಕಲ್ಪನೆಯಿಂದ ಕೂಡಿದೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಅಭಿಪ್ರಾಯಪಟ್ಟರು.
ಇದರಿಂದ ನ್ಯಾಯಾಲಯ ಪ್ರಾಚಾ ಅವರ ಮೇಲೆ 6 ಲಕ್ಷ ರೂ. ದಂಡವನ್ನು ವಿಧಿಸಿತು. ಈ ಹಿಂದೆ ವಿಚಾರಣಾ ನ್ಯಾಯಾಲಯ ಅವರಿಗೆ 1 ಲಕ್ಷ ರೂ. ದಂಡವನ್ನು ವಿಧಿಸಿತ್ತು.





