ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿ ಕೂಟದಿಂದ ಧರಣಿ

Photo: PTI
ರಾಂಚಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಮೊದಲ ಬಾರಿಗೆ ಜಾರ್ಖಂಡ್ ರಾಜ್ಯದಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಿದೆ.
ರಾಂಚಿಯಲ್ಲಿ ರಾಜಭವನದ ಸಮೀಪ ಧರಣಿ ನಡೆಯಿತು. ಈ ಧರಣಿಯಲ್ಲಿ ಕಾಂಗ್ರೆಸ್, ಜೆಎಂಎಂ, ಆರ್ಜೆಡಿ, ಟಿಎಂಸಿ, ಎಎಪಿ ಹಾಗೂ ಎಡಪಕ್ಷಗಳು ಪಾಲ್ಗೊಂಡವು. ಇದೇ ರೀತಿ ವಿವಿಧ ಜಿಲ್ಲೆಗಳ ಕಾರ್ಯಾಲಯದ ಮುಂದೆ ‘ಇಂಡಿಯಾ’ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಯಿತು.
ನಾಲ್ಕು ಗಂಟೆಗಳ ಕಾಲ ನಡೆದ ಧರಣಿಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸರಿಸುಮಾರು ಎಲ್ಲಾ ಮಿತ್ರ ಪಕ್ಷಗಳ ನಾಯಕರು ಪಾಲ್ಗೊಂಡರು.
ಮಣಿಪುರ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂದು ಮಿತ್ರ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಆಗ್ರಹಿಸುವ ಮನವಿಯನ್ನು ಪ್ರತಿಭಟನಕಾರರು ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರ ಮೂಲಕ ರಾಷ್ಟ್ರಪತಿ ಮುರ್ಮು ಅವರಿಗೆ ಸಲ್ಲಿಸಿದರು.





